ರಾಯಚೂರು : ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿಯನ್ನು ಮಂಜೂರು ನೀಡಿ ಹಕ್ಕುಪತ್ರ ಕೊಡಬೇಕು ಎಂದು ಒತ್ತಾಯಿಸಿ ಭೂಮಿ ವಸತಿ ಹೋರಾಟ ಸಮಿತಿ ಜನವರಿ 26 ಗಣರಾಜ್ಯೋತ್ಸವ ದಿನದಂದು ಜಿಲ್ಲೆಯಾದ್ಯಂತ ಕ್ಷೇತ್ರದ ಎಲ್ಲ ಶಾಸಕರು ಮನೆ ಮತ್ತು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಚಾಲಕ ರವಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಇಂದು ಭೂಮಿ ವಸತಿ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸಂಚಾಲಕ ಮಾರೆಪ್ಪ ಹರವಿ ರಾಜ್ಯದಲ್ಲಿ ಸರ್ಕಾರದ ಲೆಕ್ಕದಲ್ಲೇ ಫಾರಂ ನಂ. 50ರಲ್ಲಿ 10,89,268 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಇದರಲ್ಲಿ 6,98,220 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಫಾರಂ ನಂ. 53ರಲ್ಲಿ ಅರ್ಜಿ ಸಲ್ಲಿಸಿರುವ 10,98,397 ಅರ್ಜಿಗಳಲ್ಲಿ 737,435 ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಅಂದರೆ ಫಾರಂ ನಂ. 50 ಮತ್ತು 53ರಲ್ಲಿ ಸಲ್ಲಿಸಿದ ಒಟ್ಟು 21,87,665 ಅರ್ಜಿಗಳಲ್ಲಿ 14,35,655 ಅರ್ಜಿಗಳು, ಅಂದರೆ ಮೂರರಲ್ಲಿ ಎರಡರಷ್ಟು ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ನಂತರ ಫಾರಂ.ನಂ. 57ರಲ್ಲಿ ಸಲ್ಲಿಸಿದ 8,57,640 ಆರ್ಜಿಗಳು ಇವ ತಿರಸ್ಕರಿಲ್ಪಟ್ಟ ಅರ್ಜಿದಾರರಿಗೆ ಪರ್ಯಾಯವೇನು? ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸುತ್ತಿಲ್ಲ. ಇನ್ನೂ ಬಡವರ ಹೆಸರಿನಲ್ಲಿ, ಭೂಮಿಯಿದ್ದರೂ ದಾಖಲೆಗಳು ಬಲಾಡ್ಯರ ಕೈಯಲ್ಲಿರುವ ದಾಖಲೆಗಳು ಬಡವರ ಹೆಸರಿನಲ್ಲಿದ್ದು ಭೂಮಿ ಬಲಾಡ್ಯರ ಹಿಡಿತದಲ್ಲಿರುವ ನೂರಾರು ಪ್ರಕರಣಗಳು ರಾಜ್ಯದಲ್ಲಿವೆ. ಭೂನ್ಯಾಯ ಮಂಡಳಿಗಳು ನ್ಯಾಯವನ್ನು ಒದಗಿಸುವ ಬದಲಿಗೆ ರಾಜಕೀಯ ಒತ್ತಡ, ಹಣಬಲದಿಂದ ಬಡವರಿಗೆ ನ್ಯಾಯ ಮರಿಚಿಕೆಯಾಗಿದೆ ಎಂದರು.
ರಾಜ್ಯದಲ್ಲಿ ವಸತಿಗಾಗಿ 94ಸಿಯಲ್ಲಿ 6,20,551 ಮತ್ತು 94ಸಿಸಿ ಅಡಿಯಲ್ಲಿ 2,35,822 ಒಟ್ಟು 856,373 ಅರ್ಜಿಗಳು ಬಂದಿವೆ. ಇದರಲ್ಲಿ 5,04,700 ಅರ್ಜಿಗಳು ತಿರಸ್ಕರಿಸಲ್ಪಟ್ಟು 2,01,673 ಮಾತ್ರ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಲಾಗಿದೆ. ರಾಜ್ಯಾದ್ಯಂತ ಪಂಚಾಯ್ತಿಯಿಂದ ಹಿಡಿದು ಮಹಾನಗರ ಪಾಲಿಕೆಗಳ ತನಕ ಲಕ್ಷಾಂತರ ವಸತಿ ರಹಿತರು ವಸತಿಗಾಗಿ ವರ್ಷಗಟ್ಟಲೆ ಜನ ಪ್ರತಿನಿಧಿಗಳ ಕಚೇರಿ-ಮನೆಗಳಿಗೆ ಅಲೆಯುತ್ತಲೇ ಇದ್ದರೂ 6 ಲಕ್ಷದಷ್ಟು ಅರ್ಜಿಗಳನ್ನು ತಿರಸ್ಕರಿಸುವುದು ಯಾವ ನ್ಯಾಯ? ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಅಶೋಕ್ ನೀಲಗಲ್, ನಾಗರಾಜ್, ಬೊಮ್ಮನಾಳ,ವೀರೇಶ ನಾಯಕ್ ಸೇರಿದಂತೆ ಇತರರು ಇದ್ದರು.



















