ರಾಯಚೂರು: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜ.೭,೮ ರಂದು ಕಲ್ಯಾಣ ಕರ್ನಾಟಕ ಆಯ್ದ ಕಾರ್ಯಕರ್ತರಿಗೆ ೨ ದಿನದ ಅಧ್ಯಯನ ಶಿಬಿರವನ್ನು ದೇವದುರ್ಗ ತಾಲೂಕಿನ ಗೂಗಲ್ ಶ್ರೀ ಅಲ್ಲಮಪ್ರಭು ಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಲಬುರಗಿ ಕೃಷಿ ವಿಶ್ವವಿದ್ಯಾಲಯದ ನಿವೃತ್ತಿ ಕುಲಪತಿ ಹಾಗೂ ನಿವೃತ್ತಿ ಐ ಸಿ. ಎ.ಆರ್ ನಿರ್ದೇಶಕ ಎಸ್. ಎ.ಪಾಟೀಲ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮಾರಣ್ಣ ಗುಡಿಹಾಳ ವಹಿಸಲಿದ್ದಾರೆ ಎಂದರು. ಪ್ರತಿ ವಿಭಾಗದಲ್ಲಿ ಒಂದು ಅಧ್ಯಯನ ಶಿಬಿರವನ್ನು ಮಾಡಲಾಗುತ್ತಿದೆ. ಈ ಶಿಬಿರದಲ್ಲಿ ೭ ಜಿಲ್ಲೆಗಳಿಂದ ಪ್ರತಿ ಜಿಲ್ಲೆಯಿಂದ ಕೇವಲ ೨೫ ಜನರಿಗೆ ಮಾತ್ರ ಅವಕಾಶವಿದೆ ಎಂದರು. ಜೋಳ ಖರೀದಿ ಕೇಂದ್ರದಲ್ಲಿ ಕಳೆದ ವರ್ಷ ರೈತರಿಂದ ೭೫ ಕ್ವಿಂಟಲ್ ಖರೀದಿ ಮಾಡಿದ್ದರು ಆದರೆ ಇಂದು ಕೇವಲ ೨೦ ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತಿದ್ದಾರೆ. ಕೂಡಲೇ ಕಳೆದ ಬಾರಿಯಂತೆ ೭೫ ಕ್ವಿಂಟಲ್ ಜೋಳ ಖರೀದಿ ಮಾಡದಿದ್ದರೆ ಶಿಬಿರದ ನಂತರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ದೇವರಾಜ ನಾಯಕ, ಬುದಯ್ಯ ಸ್ವಾಮಿ, ಅಬ್ದುಲ್, ಭೀಮಯ್ಯ ಇದ್ದರು.



















