ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆಯಲ್ಲಿ ರಾಧಾಕೃಷ್ಣನ್ ಹಿನ್ನಡೆ: ದೇವೀಂದ್ರ ದೇಸಾಯಿ ಕಲ್ಲೂರ
ಕಲ್ಬುರ್ಗಿ: ಸಂಸದೀಯ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಎಲ್ಎಡಿ – MPLADS) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಂಸದರಿಗೆ ನೀಡಲಾಗುವ ಅನುದಾನವನ್ನು ಕ್ಷೇತ್ರಾಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಈ ಅನುದಾನದ ಬಳಕೆಯಲ್ಲಿ ಅಸಮತೆ ಕಂಡುಬರುತ್ತಿದೆ.
ಡಿಸೆಂಬರ್ 23, 1993 ರಂದು ಕೇಂದ್ರ ಸರ್ಕಾರದ ಸಂಪೂರ್ಣ ಧನಸಹಾಯದೊಂದಿಗೆ ಆರಂಭಗೊಂಡ ಎಂಪಿಎಲ್ಎಡಿ ಯೋಜನೆಯಡಿ, ಲೋಕಸಭೆ ಹಾಗೂ ರಾಜ್ಯಸಭೆಯ ಪ್ರತಿಯೊಬ್ಬ ಸಂಸದರಿಗೆ ವಾರ್ಷಿಕವಾಗಿ ಐದು ಕೋಟಿ ರೂ. ಅನುದಾನ ಲಭ್ಯವಿರುತ್ತದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ (ಪ್ರತಿ ಕಂತಿಗೆ 2.5 ಕೋಟಿ ರೂ.) ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ಪ್ರಸಕ್ತ ವರ್ಷದ ಅನುದಾನವನ್ನು ಬಳಸಿಕೊಳ್ಳದೇ ಇದ್ದಲ್ಲಿ ಅಥವಾ ಉಳಿದಿದ್ದರೆ, ಅದನ್ನು ಮುಂದಿನ ವರ್ಷಕ್ಕೆ ಸೇರಿಸುವ ವ್ಯವಸ್ಥೆಯೂ ಇದೆ.
ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ರಸ್ತೆ, ಕುಡಿಯುವ ನೀರು, ಶಾಲೆ, ಆಸ್ಪತ್ರೆ, ಸಾರ್ವಜನಿಕ ಮೂಲಸೌಕರ್ಯಗಳಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರ ಸಂಸದರಿಗೆ ಈ ಯೋಜನೆಯಡಿ ನೀಡಲಾಗಿದೆ. ಆದರೆ, ಲಭ್ಯವಿರುವ ಮಾಹಿತಿಯ ಪ್ರಕಾರ, ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದರಾದ ರಾಧಾಕೃಷ್ಣನ್, ಎಂಪಿಎಲ್ಎಡಿ ಅನುದಾನದಡಿ ಕೆಲ ಕಾಮಗಾರಿಗಳನ್ನು ಆರಂಭಿಸಿದ್ದರೂ, ಇದುವರೆಗೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಲ್ಬುರ್ಗಿ ನಗರ ಅಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಇತರೆ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಸದರು ಎರಡು ಕೋಟಿಗೂ ಅಧಿಕ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿರುವ ಉದಾಹರಣೆಗಳಿದ್ದರೂ, ಕಲಬುರಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕ್ಷೇತ್ರದ ಜನತೆಗೆ ಅನುಕೂಲವಾಗಲೆಂದು ಜಾರಿಗೊಂಡ ಈ ಯೋಜನೆಯ ಉದ್ದೇಶ ಪೂರ್ಣವಾಗಿ ಸಾಕಾರಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಎಂಪಿಎಲ್ಎಡಿ ಅನುದಾನ ಬಳಕೆಯ ಕುರಿತು ಪಾರದರ್ಶಕತೆ, ವೇಗ ಮತ್ತು ಜವಾಬ್ದಾರಿತನ ಅಗತ್ಯವೆನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.



















