ಅವಳಿ ತಾಲ್ಲೂಕಿನ 19 ಕೆರೆಗಳಿಗೆ ಪ್ರಾಯೋಗಿಕ ನೀರು ಹರಿಸುವ ಕಾರ್ಯ : ಶಾಸಕ ಪಾಟೀಲ
ಇಂಡಿ : ‘ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲೆ ಇಂಡಿ ಮತ್ತು ಚಡಚಣ ತಾಲ್ಲೂಕಿನ 19 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಕೈಗೊಳ್ಳಲಾಗಿದೆ’ ಎಂದು ‘ಇಂಡಿ ಶಾಸಕ ಯಶವಂತರಾಯಗೌಡ ವಿ.ಪಾಟೀಲ ಹೇಳಿದರು.
ಇಂಡಿ ತಾಲ್ಲೂಕಿನ ಹೊರ್ತಿಯ ಅಗಸನಾಳ ಕಾಲುವೆ ಬಳಿ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯಡಿ ಜಾಕ್ವೆಲ್ ಮೂಲಕ ಇಂಡಿ ಮತ್ತು ಚಡಚಣ ತಾಲ್ಲೂಕಿನ 19 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೆರೆಗಳಿಗೆ ನೀರು ಹರಿಸುವುದರಿಂದ ‘ಅಂತರ್ ಜಲಮಟ್ಟ, ಬಾವಿ ಹಾಗೂ ಬೋರವೆಲ್ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಇದರಿಂದ ಕುಡಿಯುವ ನೀರು ಮತ್ತು ಹೊಲ-ಗದ್ದೆಗಳಿಗೆ ನೀರು ಹಾರಿಸಲು ಅನೂಕೂಲ ಆಗಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಇಂಡಿ ತಾಲೂಕಿನ ಹೊರ್ತಿ, ಕೊಳರಗಿ, ನಿಂಬಾಳ, ದೇಗಿನಾಳ, ಬಬಲಾದಿ, ಹಲಗುಣಕಿ, ಗುಂಡವಾನ, ಕೂಡಗಿ, ಸಾವಳಸಂಗ, ಸೋನಕನಹಳ್ಳಿ, ಹಡಲಸಂಗ ಮುಂತಾದ 13 ಕೆರೆಗಳು ಹಾಗೂ ಜಿಗಜಿವಣಗಿ, ತಾಲೂಕಿನ ಸಾತಲಗಾಂವ, ಇಂಚಗೇರಿ, ಶಿಗಣಾಪುರ, ನಂದರಗಿ ಮುಂತಾದ ಕೆರೆಗಳು ಸೇರಿದಂತೆ ಒಟ್ಟು 19 ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯ ಜಾಕ್ವೆಲ್ ವೀಕ್ಷಣೆ ಮಾಡಿದರು.
ನಾಗಠಾಣ ಶಾಸಕ ವಿಠ್ಠಲ್ ಕಟಕದೊಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗುರಣಗೌಡ ಪಾಟೀಲ. ಸದಸ್ಯ ಮಹಾದೇವ ಪೂಜಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ನಾಯಕ, ಇಲಿಯಾಸ ಬೋರಾಮಣಿ, ರವಿದಾಸ, ಜಾಧವ, ಪ್ರಕಾಶಗೌಡ ಪಾಟೀಲ, ರೈತ ಮುಖಂಡರಾದ ಗುರುನಾಥ ಬಗಲಿ, ಮಲಗೌಡ ಬಿರಾದಾರ, ಕೃಷ್ಣಾ ಭಾಗ್ಯ ಜಲನಿಗಮ ನಿಗಮದ ಎಂಜಿನಿಯರ್ಗಳಾದ ಡಿ.ಬಸವರಾಜ, ಮಹೇಶ ರಿಯಾಜ್ ಬಾಗಲಕೋಟೆ, ಗೋವಿಂದ ರಾಠೋಡ, ಅಶೋಕ ರೆಡ್ಡಿ ಪಾಟೀಲ ಇದ್ದರು.