ಕ್ಷೇತ್ರವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ರಾಜಕಾರಣಕ್ಕೆ ಬಂದೆ: ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲಿ’ – ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ರಣಕಹಳೆ.
ಮುದ್ದೇಬಿಹಾಳ: “ಬೆದರಿಕೆ ರಾಜಕಾರಣ ಮಾಡುವ ಕಾಲ ಮುಗಿದಿದೆ. ಮುದ್ದೇಬಿಹಾಳದ ಮಣ್ಣಿನಲ್ಲಿ ಹುಟ್ಟಿಕೊಂಡಿರುವ ಗುಲಾಮಗಿರಿ ಪದ್ಧತಿಯನ್ನು ಬೇರುಸಹಿತ ಕಿತ್ತೆಸೆಯಲು ನಾನು ರಾಜಕೀಯಕ್ಕೆ ಬಂದಿದ್ದೇನೆ ಹೊರತು ಯಾರಿಗೂ ಹೆದರಲು ಅಲ್ಲ,” ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅಬ್ಬರಿಸಿದ್ದಾರೆ.
ಪಟ್ಟಣದ ದಾಸೋಹ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅತ್ಯಂತ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕ ಸಿ.ಎಸ್. ನಾಡಗೌಡರ ವಿರುದ್ಧ ಭ್ರಷ್ಟಾಚಾರ, ಬೇನಾಮಿ ಆಸ್ತಿ ಮತ್ತು ಸುಳ್ಳಿನ ರಾಜಕಾರಣದ ಸರಣಿ ಆರೋಪಗಳನ್ನು ಹೊರಿಸುವ ಮೂಲಕ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದರು.
ತಾಳಿಕೋಟಿ ತಾಲೂಕು ಘೋಷಣೆ: ಸುಳ್ಳಿನ ಕಂತೆ ಬಿಚ್ಚಿಟ್ಟ ನಡಹಳ್ಳಿ ಸುದ್ದಿಗೋಷ್ಠಿಯ ಆರಂಭದಲ್ಲೇ ತಾಳಿಕೋಟಿ ತಾಲೂಕು ಘೋಷಣೆಯ ವಿಷಯವಾಗಿ ಶಾಸಕರ ವಿರುದ್ಧ ಹರಿಹಾಯ್ದ ನಡಹಳ್ಳಿ, “ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಜಗದೀಶ್ ಶೆಟ್ಟರ್ ಅವರು ತಾಳಿಕೋಟಿಯನ್ನು ತಾಲೂಕಾಗಿ ಘೋಷಿಸಿದ್ದರು. ಅಗತ್ಯ ಅನುದಾನ ಮತ್ತು ಆಡಳಿತಾತ್ಮಕ ಕೆಲಸಗಳು ನಮ್ಮ ಅವಧಿಯಲ್ಲಿ ಆಗಿವೆ. ಆದರೆ ಈಗ ಶಾಸಕ ನಾಡಗೌಡರು ತಾವು ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಹಸಿ ಸುಳ್ಳು. ಸುಳ್ಳು ಹೇಳುವುದರಲ್ಲಿ ನಾಡಗೌಡರು ‘ನಿಸ್ಸೀಮರು’ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ,” ಎಂದು ಲೇವಡಿ ಮಾಡಿದರು.
ಗುಲಾಮಗಿರಿ ಮುಕ್ತ ಕ್ಷೇತ್ರ: ನನ್ನ ರಾಜಕೀಯ ಸಂಕಲ್ಪ
”ನಾನು ಮುದ್ದೇಬಿಹಾಳಕ್ಕೆ ಬಂದಿರುವುದೇ ಕ್ಷೇತ್ರವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು. ಇಲ್ಲಿನ ಜನರನ್ನು ಹೆದರಿಸಿ, ಬೆದರಿಸಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಕಾಲ ಮಿಂಚಿದೆ. ನಾನು ಎಂದಿಗೂ ನಾಡಗೌಡರ ಮನೆ ಮೆಟ್ಟಿಲು ಹತ್ತಿಲ್ಲ, ನನ್ನ ಚಪ್ಪಲಿಯನ್ನೂ ಅಲ್ಲಿ ಬಿಟ್ಟಿಲ್ಲ. ರಾಜಕೀಯ ಜೀವನದಲ್ಲಿ ಜಿಲ್ಲೆಯ ಯಾವುದೇ ಕಾಂಗ್ರೆಸ್ ಅಥವಾ ಬಿಜೆಪಿ ನಾಯಕರ ಮನೆಗೆ ಹೋಗಿ ತಲೆಬಾಗಿಲ್ಲ. ಮದುವೆ ಪತ್ರ ನೀಡಲು ಹೋಗುವುದು ಸೌಜನ್ಯವಷ್ಟೇ. ಅದನ್ನು ಬಿಟ್ಟು ನಾನು ನಿಮ್ಮ ಮುಂದೆ ಬಾಗಿದ್ದೇನೆ ಎಂದು ಯಾರಾದರೂ ಸಾಕ್ಷಿ ನೀಡಿದರೆ, ನನ್ನ ತಲೆಯನ್ನೇ ನಾನೇ ತೆಗೆದುಕೊಳ್ಳುತ್ತೇನೆ,” ಎಂದು ಅತ್ಯಂತ ಭಾವೋದ್ವೇಗದಿಂದ ಸವಾಲು ಹಾಕಿದರು.
ಬೇನಾಮಿ ಆಸ್ತಿ ಮತ್ತು ೨೦ ಸಾವಿರ ಎಕರೆ ದಾಖಲೆಗಳ ರಹಸ್ಯ!
ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನಲಾದ ಭೂ ವ್ಯವಹಾರಗಳ ಬಗ್ಗೆ ಗಂಭೀರ ಆರೋಪ ಮಾಡಿದ ನಡಹಳ್ಳಿ, “ಬಸರಕೋಡದಲ್ಲಿ ನೂರಾರು ಎಕರೆ ಬೇನಾಮಿ ಆಸ್ತಿ ಯಾರ ಹೆಸರಿನಲ್ಲಿದೆ? ದಾಖಲೆಗಳನ್ನು ನಾನು ತೋರಿಸಬೇಕೇ? ಹಿಂದೆ ಇಪ್ಪತ್ತು ಸಾವಿರ ಎಕರೆ ಆಸ್ತಿ ದಾಖಲೆಗಳನ್ನು ಸುಟ್ಟವರು ಯಾರು? ಈ ಬಗ್ಗೆ ಶಾಸಕರು ಉತ್ತರ ನೀಡಲಿ. ನನ್ನ ಬಳಿ ನಲವತ್ತು ಎಕರೆ ಸೇರಿದಂತೆ ದೊಡ್ಡ ಮಟ್ಟದ ಬೇನಾಮಿ ಆಸ್ತಿಯ ಪಕ್ಕಾ ದಾಖಲೆಗಳು ಇವೆ. ವಿಪರ್ಯಾಸವೆಂದರೆ, ಈ ದಾಖಲೆಗಳನ್ನು ನಿಮ್ಮವರೇ ನಮಗೆ ತಂದು ನೀಡಿದ್ದಾರೆ. ಮಾನಹಾನಿ ಮೊಕದ್ದಮೆ ಹಾಕುತ್ತೇವೆ ಎಂದು ಹೆದರಿಸಬೇಡಿ, ನ್ಯಾಯಾಲಯದಲ್ಲೇ ನೋಡೋಣ,” ಎಂದು ಗುಡುಗಿದರು.
ಪ್ರಜಾಸೌಧದ ಹೆಸರಲ್ಲಿ ಭೂ ಮಾಫಿಯಾದ ಸಂಚು?
ಪಟ್ಟಣದ ಹೊರವಲಯದಲ್ಲಿ ಪ್ರಜಾಸೌಧ ನಿರ್ಮಿಸುವ ವಿಚಾರದ ಬಗ್ಗೆ ಮಾತನಾಡುತ್ತಾ, “ನಗರ ವ್ಯಾಪ್ತಿಯಿಂದ ಏಳು ಕಿಲೋಮೀಟರ್ ದೂರದಲ್ಲಿ ಪ್ರಜಾಸೌಧ ಕಟ್ಟಲು ಯತ್ನಿಸುತ್ತಿರುವುದು ಕೇವಲ ತಮ್ಮ ಆಸ್ತಿಯ ಬೆಲೆ ಹೆಚ್ಚಿಸಿಕೊಳ್ಳಲು. ಜನರಿಗೆ ಅನುಕೂಲವಾಗುವಂತೆ ನಗರದ ಮಧ್ಯಭಾಗದಲ್ಲೇ ನಿರ್ಮಿಸಬೇಕು. ಇದನ್ನು ವಿರೋಧಿಸುವ ಹೋರಾಟಗಾರರಿಗೆ ನೋಟಿಸ್ ನೀಡಿ ಹೆದರಿಸುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ತಾಳಿಕೋಟಿ ಜನರು ಹಿಂದೆ 30 ಕಿ.ಮೀ ದೂರ ಹೋಗಿ ಕೆಲಸ ಮಾಡುತ್ತಿದ್ದರು, ಇಂದು ಪಟ್ಟಣದಿಂದ ದೂರ ಹೋಗಲು ವಿರೋಧಿಸುತ್ತಿರುವುದರಲ್ಲಿ ನ್ಯಾಯವಿದೆ. ಈ ಬಗ್ಗೆ ಗ್ರಾಮ ಸಭೆ ಕರೆದು, ವ್ಯಾಪಾರಸ್ಥರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
‘ವಸೂಲಿ ಪುತ್ರ’ನ ಹಾವಳಿ ಮತ್ತು ಲೂಟಿ ರಾಜಕಾರಣ
”ಕ್ಷೇತ್ರದಲ್ಲಿ ‘ದತ್ತು ಪುತ್ರ’ ಅಥವಾ ‘ವಸೂಲಿ ಪುತ್ರ’ ಎಂಬ ಹೆಸರಿನಲ್ಲಿ ಕೆಲವರು ಪ್ರಭಾವ ಬೀರುತ್ತಿದ್ದು, ಅವರ ಮೂಲಕ ಮತಕ್ಷೇತ್ರದಲ್ಲಿ ವ್ಯಾಪಕ ವಸೂಲಿ ನಡೆಯುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಹುಡ್ಕೋ ಹಗರಣ, ಲ್ಯಾಂಡ್ ಆರ್ಮಿ ಕೆಲಸಗಳಲ್ಲಿ ದೊಡ್ಡ ಮಟ್ಟದ ಕಿಕ್ಬ್ಯಾಕ್ ಪಡೆಯಲಾಗಿದೆ. ನಾಲತವಾಡದಲ್ಲಿ ಬಡವರಿಗೆ ನೀಡಬೇಕಾದ ೩೫೦ ಮನೆಗಳನ್ನು ಕಸಿದುಕೊಳ್ಳುತ್ತಿರುವ ಶಕ್ತಿಗಳು ಯಾವುವು? ಸಮುದಾಯ ಭವನ ನಿರ್ಮಾಣದಲ್ಲಿ ಆದ ಅವ್ಯವಹಾರಗಳಿಗೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.
ಅನುದಾನದ ಲೆಕ್ಕ ಕೇಳಿದ ನಡಹಳ್ಳಿ ”ಶಾಸಕರು 700 ಕೋಟಿ ಅನುದಾನ ತಂದಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ದಾಖಲೆಗಳನ್ನು ಒದಗಿಸಲು ತಯಾರಿಲ್ಲ. ನಿಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಒಂದು ರೂಪಾಯಿ ಹೆಚ್ಚುವರಿ ಅನುದಾನ ತಂದಿದ್ದಕ್ಕೂ ಸಾಕ್ಷಿ ಇಲ್ಲ. ಮುದ್ದೇಬಿಹಾಳ ಕೆರೆಗೆ ಮೀಸಲಾದ ಒಂದು ಕೋಟಿ ರೂಪಾಯಿ ಅನುದಾನವನ್ನು ವೈಯಕ್ತಿಕ ಲಾಭಕ್ಕೆ ಬಳಸದೆ, ಕೆರೆಯ ಅಭಿವೃದ್ಧಿಗೆ ಬಳಸಬೇಕು,” ಎಂದು ಎಚ್ಚರಿಕೆ ನೀಡಿದರು.
ಮೈಸೂರು ಸ್ಯಾಂಡಲ್ ಸೋಪ್ ಹಗರಣದ ಕೊಂಡಿ
”ನನ್ನ ಬಳಿ ಕೇವಲ ಸ್ಥಳೀಯ ವಿಚಾರಗಳಲ್ಲ, ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ವಿವಿಧ ರಾಜ್ಯಮಟ್ಟದ ಹಗರಣಗಳ ಬಗ್ಗೆಯೂ ಭದ್ರವಾದ ದಾಖಲೆಗಳಿವೆ. ಸಮಯ ಬಂದಾಗ ಎಲ್ಲವನ್ನೂ ಒಂದೊಂದಾಗಿ ಬಹಿರಂಗಪಡಿಸುತ್ತೇನೆ. ನಮ್ಮ ಪಕ್ಷದಲ್ಲಿದ್ದುಕೊಂಡೇ ನಿಮ್ಮ ಪರ ಕೆಲಸ ಮಾಡಿದವರು ಯಾರೆಂದು ನಮಗೆ ಗೊತ್ತಿದೆ. ನಮ್ಮ ಕಾರ್ಯಕರ್ತರೂ ಬಳೆ ತೊಟ್ಟಿಲ್ಲ, ಅವರು ಬಲಿಷ್ಠರಾಗಿದ್ದಾರೆ,” ಎಂದು ವಿರೋಧಿ ಬಣಕ್ಕೆ ಎಚ್ಚರಿಕೆ ನೀಡಿದರು.
ಮುಕ್ತಾಯ: ಚುನಾವಣೆಯ ಸವಾಲು ”ಏಳು ಜನ್ಮ ಬಂದರೂ ನಡಹಳ್ಳಿ ಗೆಲ್ಲುವುದಿಲ್ಲ ಎಂದು ನಾಟಕವಾಡುವುದು ಬಿಡಿ. ಕ್ಷೇತ್ರ ವಿಂಗಡನೆ ಮತ್ತು ಮಹಿಳಾ ಮೀಸಲಾತಿ ತರುತ್ತೇವೆ ಎಂದು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಫಲಿಸದು. ಸಾಯುವವರೆಗೂ ನಾನು ಯಾರಿಗೂ ಬಗ್ಗುವುದಿಲ್ಲ, ಬಾಗುವುದಿಲ್ಲ. ಜನರೇ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ,” ಎನ್ನುವ ಮೂಲಕ ನಡಹಳ್ಳಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಪಂಪಣ್ಣವರ,ಗಿರೀಶಗೌಡ ಪಾಟೀಲ್, ಮದನಸ್ವಾಮಿ, ಕೆಂಚಪ್ಪಣ್ಣ ಬಿರಾದಾರ, ಶಂಕರಗೌಡ ಶಿವಣಗಿ, ವೈ.ಟಿ. ಗೌಡರ್, ಅಶೋಕ್ ರಾಠೋಡ, ಸಿದ್ದರಾಜ ಹೊಳಿ, ಬಸವರಾಜ ಚಿತ್ತರಗಿ, ಸಂಗನಗೌಡ ಪಾಟೀಲ್, ಚೇತನ್ ಸಂಗಮ್, ಸಹನಾ ಬಡಿಗೇರ್, ಸಂಗಮ್ಮ ದೇವರಳ್ಳಿ ,ಅಪ್ಪಣ್ಣ ದನ್ನೂರ್, ಶ್ರೀಶೈಲ್ ದೊಡ್ಡಮನಿ,ಮಲ್ಲಣ್ಣ ತಂಗಡಗಿ, ಹರೀಶ್ ನಾಟಿಕಾರ, ಮಹಾಂತೇಶ20-4 ಗಂಗನಗೌಡರ, ನಾಗೇಶ್ ಕವಡಿಮಟ್ಟಿ ಹಾಗೂ ಸಂತೋಷ್ ಗೌಡರ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.