ಶಾಂತಿಯುತ, ಸೌಹಾರ್ದಯುತ ಹೋಳಿ ಆಚರಣೆಗೆ ಪೊಲೀಸ್ ಇಲಾಖೆ ಕರೆ
ಮುದ್ದೇಬಿಹಾಳ: “ಹೋಳಿ ಹಬ್ಬವು ಸ್ನೇಹ ಬಾಂಧವ್ಯದ ಸಂಕೇತವಾಗಿದೆ. ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು” ಎಂದು ಸಿಪಿಐ ಮಹಮ್ಮದ್ ಫಸಿಯುದ್ದಿನ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸೌಹಾರ್ದತೆ ಮುಖ್ಯ: ಇದೇ ಅವಧಿಯಲ್ಲಿ ರಂಜಾನ್ ಮಾಸವೂ ಇರುವುದರಿಂದ ಎಲ್ಲ ಸಮುದಾಯದವರು ಪರಸ್ಪರ ಗೌರವದಿಂದ ಹಬ್ಬಗಳನ್ನು ಆಚರಿಸಬೇಕು. ಗಲಾಟೆ ಅಥವಾ ಶಾಂತಿ ಭಂಗ ಉಂಟುಮಾಡುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿಪಿಐ ಎಚ್ಚರಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿ: ಪಿಎಸ್ಐ ಸಂಜಯ ತಿಪರೆಡ್ಡಿ ಮಾತನಾಡಿ, “ಪ್ರಸ್ತುತ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅಡ್ಡಿಯಾಗದಂತೆ ಬಡಾವಣೆಗಳಲ್ಲಿ ಹಲಿಗೆ ಬಾರಿಸುವುದನ್ನು ನಿಯಂತ್ರಿಸಬೇಕು. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು,” ಎಂದರು.
ಸುರಕ್ಷತಾ ಕ್ರಮಗಳು: ರಾಸಾಯನಿಕ ಬಣ್ಣಗಳ ಬಳಕೆಯನ್ನು ತ್ಯಜಿಸಬೇಕು. ಕೆನಾಲ್ ಹಾಗೂ ಬಾವಿಗಳಲ್ಲಿ ಸ್ನಾನ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
”ಸಮಸ್ಯೆಗಳಿದ್ದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ, ಠಾಣಾ ಮಟ್ಟದಲ್ಲಿ ಅವುಗಳನ್ನು ಬಗೆಹರಿಸಲಾಗುವುದು.” –
ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಅಶೋಕ ನಾಡಗೌಡ ಮತ್ತು ಸದ್ದಾಂ ಕುಂಟೋಜಿ ಮಾತನಾಡಿದರು.
ಈ ವೇದಿಕೆಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ, ಎ.ಎಸ್.ಐ ಕರೆಪ್ಪ ಅಸ್ತಿ, ಪ್ರಕಾಶ ಪುಜಾರಿ, ರಾಘು ಇಂಗಳಗಿ, ಸಂಗಮೇಶ ಚಲವಾದಿ, ಉಮೇಶ ಬನಸೋಡೆ,ರಪೀಕ ಶಿರೋಳ,
ಸೇರಿದಂತೆ ಹಿಂದೂ-ಮುಸ್ಲಿಂ ಸಮುದಾಯದ ಪ್ರಮುಖರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.