ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಛಲವನ್ನು ನಮ್ಮ ಸರಕಾರ ಹೊಂದಿದೆ :ಸಚಿವ ಎಚ್ ಕೆ ಪಾಟೀಲ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಛಲವನ್ನು ನಮ್ಮ ಸರಕಾರ ಹೊಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ರಾಜ್ಯ ಸರತಾkಾದ ಎರಡು ವರ್ಷಗಳ ಸಾಧನೆ ಸಮಾವೇಶ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಜಯಪುರ ಜಿಲ್ಲೆ ಮತ್ತು ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸುವ ಕುರಿತು ಪೂರ್ವಭಾವಿಯಲ್ಲಿ ಅವರು ಮಾತನಾಡಿದರು.
ಆಲಮಟ್ಟಿ ಜಲಾಷಯ ಎತ್ತರ ಕುರಿತು ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದರೂ ಕೇಂದ್ರ ಸರಕಾರ ಇನ್ನೂ ಗೆಜೆಟ್ ನೊಟಿಫಿಕೇಶನ್ ಹೊರಡಿಸಿಲ್ಲ. ಬಿಜೆಪಿಯ ಸಂಸದರು, ಸಚಿವರು ಸೇರಿದಂತೆ ಯಾವ ಜನಪ್ರತಿನಿಧಿಗಳೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಆದರೆ, ಉತ್ತರ ಕರ್ನಾಟಕದ ನಾವೆಲ್ಲ ಸಚಿವರು ಸಿಎಂ ಅವರನ್ನು ಭೇಟಿ ಮಾಡಿ ಪ್ರಧಾನಿ ಮೇಲೆ ಈ ಕುರಿತು ಒತ್ತಡ ತರುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ರೂ. 5500 ಕೋ. ಹಣವನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಒಂದು ನೈಯ್ಯಾ ಪೈಸೆ ಬಿಡುಗಡೆ ಮಾಡಿಲ್ಲ. ಬರಗಾಲ ಸಮಯದಲ್ಲಿ ನಾವು ಸುಪ್ರೀಂ ಕೋರ್ಟಿನ ಮೊರೆ ಹೋಗಿ ನ್ಯಾಯ ಪಡೆಯಬೇಕಾಯಿತು. ಕೇಂದ್ರದ ಅಸಹಕಾರದ ನಡುವೆಯೂ ಸಿಎಂ ಎಸ್. ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಇವುಗಳಲ್ಲಿ 2000 ರಕ್ಷಿತ ಸ್ಮಾರಕಗಳಿವೆ. ವಿಜಯಪುರ ಜಿಲ್ಲೆಯಲ್ಲಿರುವಷ್ಟು ಪ್ರವಾಸೋದ್ಯಮ ಸ್ಥಳಗಳು ರಾಜ್ಯದ ಬೇರಾವ ಜಿಲ್ಲೆಗಳಲ್ಲಿಯೂ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದೇವೆ. ಸಚಿವ ಎಂ. ಬಿ. ಪಾಟೀಲ, ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮೂರು ಲಕ್ಷ ಜನ ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಸರಕಾರದ ಎರಡು ವರ್ಷದ ಪ್ರಗತಿಯ ಸಮಾವೇಶ ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆ ಎತ್ತುವಲ್ಲಿ ಸಹಾಯವಾಗಿವೆ. ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ ರೂ. 60 ಸಾವಿರ ರೂಪಾಯಿ ಸೌಲಭ್ಯ ಒದಗಿಸಿವೆ. ಟೀಕೆ ಮಾಡುವವರಿಗೆ ಈ ಸಮಾವೇಶ ಸೂಕ್ತ ಉತ್ತರ ನೀಡಲಿದೆ. ಎರಡು ವರ್ಷಗಳಲ್ಲಿ ಸರಕಾರ ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ಬಡವರ ಕಣ್ಣೀರು ಒರೆಸಿ, ಹಸಿವು ನೀಗಿಸಿ ಬದುಕು ಹಸನಾಗಿಸುವ ಕೆಲಸ ನಡೆದಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಗ್ಯಾರಂಟಿ ಯೋಜನೆಗಳು ಶೇ. 98.5 ಅರ್ಹರಿಗೆ ತಲುಪಿಸುವ ಕೆಲಸವಾಗಿದೆ. ಈವರೆಗೆ ರೂ. 90 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ. ಒಂದು ನೈಯ್ಯಾ ಪೈಸೆಯಷ್ಟು ಭ್ರಷ್ಚಾಚಾರವಾಗಿಲ್ಲ. ಯೋಜನೆಯ ಸಂಪೂರ್ಣ ಲಾಭ ಫಲಾನುಭವಿಗಳಿಗೆ ತಲುಪಿದೆ. ಇದುವರೆಗೆ ಯಾವುದೇ ಯೋಜನೆಗಳು ಇಷ್ಟೋಂದು ಪ್ರಮಾಣದಲ್ಲಿ ಸರಕಾರಿ ಯೋಜನೆಗಳ ಲಾಭ ದೊರೆತಿಲ್ಲ ಎಂದು ಎಚ್. ಕೆ. ಪಾಟೀಲ ಹೇಳಿದರು.
ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ತಿಕೋಟಾ ತಾಲೂಕಿನ ತಾಲೂಕಿನ 4486 ಮತ್ತು ಬಬಲೇಶ್ವರ ತಾಲೂಕಿನಲ್ಲಿ 877 ಫಲಾನುಭವಿಗಳ ಹಕ್ಕುಪತ್ರ ಅರ್ಜಿಗಳು ಪುರಸ್ಕೃತಗೊಂಡಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಶಾಸಕ ಸುನಿಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಎಸ್.ಲೋಣಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಮುಖಂಡರಾದ ಕೆ. ಎಚ್. ಮುಂಬಾರೆಡ್ಡಿ, ಎಚ್. ಎಸ್. ಕೊರಡ್ಡಿ, ಅಪ್ಪುಗೌಡ ಪಾಟೀಲ, ಯಾಕೂಬ ಜತ್ತಿ, ವಿ. ಎಸ್. ಪಾಟೀಲ, ಆನಂದಕುಮಾರ ದೇಸಾಯಿ, ಬಸನಗೌಡ ಪಾಟೀಲ, ಮಲ್ಲು ದಳವಾಯಿ, ಉಮೇಶ ಮಲ್ಲಣ್ಣವರ, ಲಕ್ಷ್ಮಣ ಚಿಕದಾಣಿ, ರಮೇಶ ಸುಳಿಭಾವಿ, ಚನ್ನಪ್ಪ ಕೊಪ್ಪದ, ಪೀರ ಪಟೇಲ್, ಎಲ್. ಎಸ್. ನಿಡೋಣಿ, ರಫೀಕ್ ಕಾನೆ, ಮದ್ದುರಾಜ ಕುಲಕರ್ಣಿ, ಡಾ. ಗಂಗಾಧರ ಸಂಬಣ್ಣಿ, ಅಬ್ದುಲಹಮೀದ್ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.