ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರ ಇರಬೇಕು : ಶಾಸಕ ನಾಡಗೌಡ
ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಶಾಸಕ ನಾಡಗೌಡ
ಖಿಲಾರಹಟ್ಟಿ ಗ್ರಾಮದಲ್ಲಿ ಅದ್ಧೂರಿ ಉಚಿತ ಸಾಮೂಹಿಕ ವಿವಾಹ: ನವಜೋಡಿಗಳಿಗೆ ಶಾಸಕ ಸಿ.ಎಸ್. ನಾಡಗೌಡ ಕಿವಿಮಾತು
ಮುದ್ದೇಬಿಹಾಳ: “ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರವಿದ್ದು, ತಮ್ಮ ಮನೆತನದ ಹೆಸರನ್ನು ಉಳಿಸಿಕೊಂಡು ಹೋಗಬೇಕು” ಎಂದು ಶಾಸಕ ಹಾಗೂ ಕೆಎಸ್ ಡಿ ಎಲ್ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಹೇಳಿದರು.
ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಶನಿವಾರ ಶ್ರೀ ಭೀರಲಿಂಗೇಶ್ವರ ಹಾಗೂ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ೨೨ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಸಂಸ್ಕಾರಯುತ ಬದುಕಿಗೆ ಶಾಸಕರ ಕರೆ
ಮುಂದುವರಿದು ಮಾತನಾಡಿದ ಶಾಸಕರು, “ನೀಲಕಂಠಪ್ಪ ಪೂಜಾರಿ ಅವರ ಕುಟುಂಬವು ಮೊದಲಿನಿಂದಲೂ ಬಡವರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸಣ್ಣ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದ ಅವರು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಅವರ ಶ್ರಮದ ಫಲ. ತಮ್ಮ ಮಕ್ಕಳಿಗೆ ಅವರು ಉತ್ತಮ ಸಂಸ್ಕಾರ ನೀಡಿದ್ದಾರೆ. ಹೆತ್ತವರು ತಮ್ಮ ಮಕ್ಕಳಿಗೆ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಬೇಕು. ಸಮಾಜದಲ್ಲಿ ನೈಜ ಪಾಠ ಕಲಿಸುವುದು ತಂದೆ-ತಾಯಿಯರ ಜವಾಬ್ದಾರಿಯಾಗಿದೆ,” ಎಂದರು.
ಸಮಾಜ ಸೇವಕ ಹಾಗೂ ಕಾಂಗ್ರೆಸ್ ಯುವ ಮುಖಂಡ ಶಾಂತಗೌಡ ಪಾಟೀಲ ಮಾತನಾಡಿ, “ಮಲ್ಲಿಕಾರ್ಜುನ ಮದರಿ ಅವರು ತಮ್ಮ ಮಗನ ಮದುವೆ ಸಂಭ್ರಮದ ಜೊತೆಗೆ ಬಡವರಿಗಾಗಿ ಉಚಿತ ಮದುವೆ ಮಾಡಿರುವುದು ಶ್ಲಾಘನೀಯ. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೀರಾವರಿ ಸೌಲಭ್ಯ ಸಿಗಬೇಕು. ಹಾಲಮತ ಸಮಾಜವು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಮಲ್ಲಿಕಾರ್ಜುನ ಮದರಿ ಅಥವಾ ಮಲ್ಲಣ್ಣ ಅಪರಾಧಿ ಅವರಂತಹವರನ್ನು ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಚಿಸಬೇಕು,” ಎಂದು ರಾಜಕೀಯ ಒಗ್ಗಟ್ಟಿನ ಮಂತ್ರ ಪಠಿಸಿದರು.
ಮದರಿ ಕುಟುಂಬದ ನಿರಂತರ ಸೇವೆ
ಅಹಲ್ಯಾಬಾಯಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಮಾತನಾಡಿ, “ನಮ್ಮ ತಂದೆಯವರಾದ ನೀಲಕಂಠಪ್ಪ ಪೂಜಾರಿ ಅವರು ೨೦೦೫ರಲ್ಲಿ ಶ್ರೀ ಭೀರಲಿಂಗೇಶ್ವರ ದೇವಸ್ಥಾನ ನಿರ್ಮಿಸಿ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಅಂದಿನಿಂದ ಇಂದಿನವರೆಗೆ ಬಡ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ನಾವು ಉಚಿತ ಮದುವೆಗಳನ್ನು ಆಯೋಜಿಸುತ್ತಿದ್ದೇವೆ. ಈ ಬಾರಿ ೧೧ ಪಲ್ಲಕ್ಕಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯಾವುದೇ ರಾಜಕೀಯ ಲಾಭವಿಲ್ಲದೆ ಬಡವರ ಸೇವೆ ಮಾಡುವುದೇ ನಮ್ಮ ಗುರಿ,” ಎಂದರು.
ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ದೇವರು ಆಶೀರ್ವಚನ ನೀಡಿ, “ಬಡವರ ಕಲ್ಯಾಣ ಮಾಡುವವನೇ ನಿಜವಾದ ಶ್ರೀಮಂತ. ಕುರಿಗಾಯಿಯಾದ ಮಾಲಿಂಗರಾಯ ದೇವರ ಆಶೀರ್ವಾದ ಮದರಿ ಕುಟುಂಬದ ಮೇಲಿದೆ,” ಎಂದರು.
ಅಗತೀರ್ಥದ ಶ್ರೀ ರೇವಣಸಿದ್ದೇಶ್ವರ ಶಾಂತಾಮಯ ಮಹಾಸ್ವಾಮೀಜಿ ಮಾತನಾಡಿ, “ಹಾಲಮತ ಧರ್ಮದಲ್ಲಿ ದೇವರಿಗೆ ಪ್ರಾಣಿ ಬಲಿ ಕೊಡುವುದನ್ನು ನಿಲ್ಲಿಸಬೇಕು. ಮದ್ಯಪಾನದಿಂದ ಮನುಷ್ಯನ ಗುರಿ ತಪ್ಪುತ್ತದೆ. ಇಂದಿನ ಕಾಲದಲ್ಲಿ ಜನಸಂಖ್ಯೆ ಏರುತ್ತಿದ್ದು, ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಆದ್ಯತೆಯಾಗಲಿ,” ಎಂದು ಕರೆ ನೀಡಿದರು.
ವೈ.ಎಚ್. ವಿಜಯಕರ್ ಮಾತನಾಡಿ, “ಕೊರೊನಾ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮದರಿ ಅವರು ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಮಾನವೀಯತೆ ಮೆರೆದಿದ್ದಾರೆ,” ಎಂದು ಸ್ಮರಿಸಿದರು.
ಈ ಇದೇ ವೇಳೆ ಲೇಖಕ ವಿರೇಶ ಗೂಡ್ಲಮನಿ ಅವರಿಂದ ಶ್ರೀ ಮಹಿಮಾಂತಕ ಮನ್ನಿರೇಶ್ವರರ ಪುಸ್ತಕ ಪೂಜ್ಯರ ಗಣ್ಯರಿಂದ ಪುಸ್ತಕ ಬಿಡುಗಡೆ ನೆರವೇರಿತು.
ದಿವ್ಯ ಸಾನಿಧ್ಯ ಸಿದ್ದನಕೊಳ್ಳ ಶಿವಕುಮಾರ ಮಹಾಸ್ವಾಮಿಗಳು ಆರ್ಶಿವಚನವನ್ನು ನೀಡಿದರು. ಅಂಕಲಿಮಠದ ಶ್ರೀ ಶ್ರೀ ವೀರಭದ್ರ ಮಹಾಸ್ವಾಮೀಜಿಗಳು, ಯರಝರಿ ಶ್ರೀ ಮಲ್ಲಾರಲಿಂಗ ಮಹಾರಾಜರು,ಶಿವಯ್ಯ ಗುರವಿನ, ಖಿಲಾರಹಟ್ಟಿ ಕಾಡಸಿದ್ದೇಶ್ವರ ಮಠ ಶ್ರಿ ರಮಾನಂದ ಮಹಾರಾಜರು, ಶ್ರೀ ಅರವಿಂದ ಮಹಾರಾಜ ಒಡೆಯರ್, ದೊಡ್ಡ ಸಣ್ಣೇಕಪ್ಪ ಮುತ್ತ್ಯಾರು,ಸಿದ್ದಭೀರ ದೇವರು, ಕೆಂಚರಾಯ ಮುತ್ತ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂ ಅಧ್ಯಕ್ಷ ಗಂಗಾಧರ ನಾಡಗೌಡ, ಉಚಿತ ಸಾಮೂಹಿಕ ಜಾತ್ರೆ ಅಧ್ಯಕ್ಷತೆ ಎನ್ ಎಸ್ ಪೂಜಾರಿ, ಬಿ ಕೆ ಬಿರಾದಾರ, ಕೆ ಅರ್ ಬಿರಾದಾರ , ಮಲೇಕೇಂದ್ರಗೌಡ ಪಾಟೀಲ, ನಿಂಗಪ್ಪಗೌಡ ಪಾಟೀಲ ಬಪ್ಪರಗಿ,ಬಿ ಎಸ್ ಶಿರೋಳ, ಬಿ ಜಿ ಜಗ್ಗಲ,ಸಂಗಮ್ಮ ದೇವರಳ್ಳಿ, ಸಾಯಬಣ್ಣ ಹಾಲ್ಯಾಳ,ಸುರೇಶ್ ಹಳಿಮನಿ,ವಿಜಯ ಪೂಜಾರಿ, ಕೀರಣ ಮದರಿ,ರವಿ ಜಗಲಿ.ಬಸವರಾಜ ಬಿಜ್ಜೂರ, ವಿರೇಶಗುಡ್ಲಮನಿ, ಬಸವರಾಜ ಗುಡ್ಲಮನಿ, ಶಶಿ ನೆರಬೆಂಚಿ, ಸೇರಿದಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಲ್ಲಿಕಾರ್ಜುನ ಮದರಿ ಕುಟುಂಬದ ಸದಸ್ಯರು ಹಾಗೂ ತಾಲ್ಲೂಕಿನ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.