ಮುದ್ದೇಬಿಹಾಳ: ಇಂದಿರಾನಗರ ಬಡಾವಣೆಯ
ನಿವಾಸಿಗಳಿಗೆ ಉತ್ತಾರೆ ಪೂರೈಸುವ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಡಿ.24 ರಿಂದ ಕಚೇರಿ ಅವಧಿಯಲ್ಲಿ ನಡೆಸುತ್ತಿದ್ದ 5 ದಿನಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಪ್ರಲಾದ ಪಾಟೀಲ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ನೀಡಿದ ಜಂಟಿ ಲಿಖಿತ ಭರವಸೆ ನೀಡಿದ ಮೇರೆಗೆ ತಹಶೀಲ್ದಾರ್ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಇವರ ಉಪಸ್ಥಿತಿಯಲ್ಲಿ ಬುಧವಾರ ಸಂಜೆ ಧರಣಿ ಸತ್ಯಾಗ್ರಹ ಅಂತ್ಯಗೊಂಡಿತು.
ಬಡಾವಣೆ ಆಸ್ತಿಗಳಿಗೆ ಉತಾರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ಸರ್ವೇ ನಂ. 57ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಶೇಡ್ಡುಗಳನ್ನು ತೆರವುಗೊಳಿಸಲಾಗಿತ್ತು. ಈ ಬಗ್ಗೆ ಕಲಬುರಗಿ ಹೈಕೋರ್ಟ ಪೀಠದಲ್ಲಿ ಎರಡು ಪ್ರತ್ಯೇಕ ರಿಟ್ ಪಿಟೀಷನ್ ದಾಖಲಾಗಿದ್ದವು.
ಇದರಿಂದಾಗಿ ಪುರಸಭೆ ಅಧ್ಯಕ್ಷ ಮುಖ್ಯಾಧಿಕಾರಿ ಮೇಲೆ ಕಂಟೆಂಪ್ಟ್ ಆಫ್ ಕೋರ್ಟ ದಾಖಲಾಗಿದ್ದು ಜುಲೈ ತಿಂಗಳಲ್ಲಿ ಮುಕ್ತಾಯಗೊಂಡಿವೆ. ಆದರೆ ನ್ಯಾಯಾಲಯ ಆದೇಶ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಉತಾರ ನೀಡುವ ಕುರಿತು ಮಂಡಳಿ ಅಧಿಕಾರಿಗಳಿಂದ ಸರ್ವೇ ಮಾಡಿರುವ ಮಾಹಿತಿ ತರಿಸಿಕೊಂಡು ಹಾಗೂ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಅಂದಾಜು
3-4 ತಿಂಗಳ ಒಳಗಾಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಉತರ ನೀಡಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ವೈ.ಎಚ್.ವಿಜಯಕರ್ ಧರಣಿ ನಿರತರ ಪರವಾಗಿ ಮಾತನಾಡಿ, ಬೇಡಿಕೆ ಈಡೇರಿಸುವ ಕುರಿತು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.
ಧರಣಿ ನಿರತರಾಗಿದ್ದ ಬಸವರಾಜ ಕೋಳೂರ, ಅಂಬರೀಷ ಉಪ್ಪಲದಿನ್ನಿ. ಮಂಜು ಚಲವಾದಿ,ಆಸಿಫ್ ನಿಡಗುಂದಿ, ಬಾಬು ಬಳಗಾನೂರ, ರಿಯಾಜ್ ಉಣ್ಣಿಬಾವಿ, ನಾರಾಯಣ ಮಿರಜಕರ, ವಿಷ್ಣು ಗಂಗಾಪೂರ,ಕೃಷ್ಣಪ್ಪ ಮಾಲಿಂಗಪೂರ, ಸಿದ್ದಯ್ಯ ಹಿರೇಮಠ,ತಾಸೀಪ್ ಬೀಳಗಿ, ಲಾಲಾಸಾಬ ಕಸಾಬ,ಮಹಿಬೂಬ ಪಡೇಕನೂರ, ಅಲ್ಲಾಭಕ್ಷ ನಿಡಗುಂದಿ, ಮಹಿಬೂಬ ಮುಲ್ಲಾ ಬುಡ್ಡಾಮುಲ್ಲಾ, ವಿಷ್ಣು ಗಂಗಾಪೂರ, ಸುಧಾ ಸಿಂಧೆ, ಗಂಗವ್ವ ಭೀಮವ್ವ ಹಾಲವಾರ, ನ್ಯಾಯವಾದಿ ರವಿ ನಾಲತವಾಡ ಸೇರಿ ಸೇರಿದಂತೆ ಉಪಸ್ಥಿತರಿದ್ದರು.
ಏತನ್ಮಧ್ಯೆ ಸಂಧಾನಕ್ಕೆ ಬಂದಿದ್ದ ತಹಶೀಲ್ದಾರ್ ಎದುರೇ ಮುಖ್ಯಾಧಿಕಾರಿ, ಮಂಡಳಿ ಅಧಿಕಾರಿಗಳೊಂದಿಗೆ ಧರಣಿ ನಿರತರು ವಾಗ್ವಾದ ನಡೆಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಇನ್ನೊಂದು ಬೇಡಿಕೆಯಾಗಿದ್ದ ಬಡಾವಣೆ ಮತದಾರರ ಪಟ್ಟಿಯಲ್ಲಿ ಬೇರೆ ಬಡಾವಣೆ, ಊರಿನವರ ಹೆಸರು ಸೇರ್ಪಡೆಯಾಗಿದ್ದು ತನಿಖೆ ನಡೆಸಿ ವಾರ್ಡಗೆ ಸಂಬಂಧಪಡದ ಮತದಾರರನ್ನು ಪಟ್ಟಿಯಿಂದ ಕೈಬಿಡಬೇಕು ಎನ್ನುವ ವಿಷಯಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ.