ಮುದ್ದೇಬಿಹಾಳ:ತಾಲೂಕಿನ ಕೃಷ್ಣಾ ನದಿ ದಂಡೆಯ ಸರ್ಕಾರದ ಅಧಿನದಲ್ಲಿರುವ ಮುಳುಗಡೆ ಪ್ರದೇಶದ ಜಮೀನುಗಳಲ್ಲಿನ ಫಲವತ್ತಾದ ಎರೆ, ಮೆಕ್ಕಲ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರಿಂದ ನದಿ ಪಾತ್ರದ ಹರಿವಿಗೆ ತೊಡಕಾಗಿ ಭವಿಷ್ಯದಲ್ಲಿ ಅಪಾಯ ಸಂಭವಿಸಬಹುದಾಗಿದೆ. ಕೂಡಲೇ ಇಂಥ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯನ್ನು ತಡೆಗಟ್ಟಬೇಕು. ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್, ಜಲಸಂಪನ್ಮೂಲ ಮತ್ತು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಪ್ರದೇಶದಲ್ಲಿ ಹಿಟಾಚಿ, ಜೆಸಿಬಿ, ಟೌರಸ್ ಟಿಪ್ಪರ್, ಟ್ರಾö್ಯಕ್ಟರ್ಗಳು ಹಗಲು ರಾತ್ರಿ ಎನ್ನದೆ ಮಣ್ಣು ಸಾಗಿಸುವ ದಂಧೆಯಲ್ಲಿ ನಿರತರವಾಗಿವೆ. ಅಧಿಕೃತ ಅನುಮತಿ ಇಲ್ಲದೆ ಟ್ರಿಪ್ಗೆ ೫೦೦೦ ರೂಗಳಂತೆ ಹಣ ಪಡೆದುಕೊಂಡು ಈ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್, ಪಿಎಸೈ ಅವರಿಗೆ ದೂರವಾಣಿ ಮೂಲಕ ಕರೆ ತಡೆಗಟ್ಟುವಂತೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ನದಿ ಪಾತ್ರದ ಮುಳುಗಡೆ ಜಮೀನು ಸರ್ಕಾರದ ಆಸ್ತಿಯಾಗಿದೆ. ಇದರಲ್ಲಿ ಅಕ್ರಮ ದಂಧೆ ನಡೆಸುತ್ತಿರುವವರನ್ನು ತಡೆಯಲು ಹೋದರೆ ಅಕ್ರಮ ದಂಧೆ ನಡೆಸುತ್ತಿರುವವರು ನಾವು ಯಾರಿಗೆ ಹೇಳಬೇಕೋ ಅವರಿಗೆ ಹೇಳಿಯೇ, ಏನು ಮುಟ್ಟಿಸಬೇಕೋ ಅದನ್ನು ಮುಟ್ಟಿಸಿಯೇ ಇದನ್ನು ಮಾಡುತ್ತಿದ್ದೇವೆ. ಬಹಳಷ್ಟು ಜನ ಕಂಪ್ಲೆAಟ್ ಕೊಟ್ಟರೂ ನಮ್ಮನ್ನು ಇದುವರೆಗೂ ಯಾರೂ ತಡೆದಿಲ್ಲ. ಯಾರಾದರೂ ತಡೆಯಲು ಬಂದರೆ ಜೆಸಿಬಿಯಿಂದ ಗುದ್ದಿಸಿ ಎರಿ ಮಣ್ಣಾಗ ಒತ್ತಿ ಬಿಡ್ರೀವಿ ಎಂದು ಬೆದರಿಕೆ ಹಾಕುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ನದಿ ಪಾತ್ರದಲ್ಲಿ ಈ ರೀತಿ ಮಣ್ಣು ಅಗೆದರೆ ನೀರಿನ ಹರಿಯುವಿಕೆಯಲ್ಲಿ ಏರುಪೇರಾಗುತ್ತದೆ. ದೊಡ್ಡ ಗುಂಡಿಗಳು ಬಿದ್ದು ಅವುಗಳಲ್ಲಿ ನೀರು ಸಂಗ್ರಹವಾಗಿ ಇದರ ಅರಿವಿಲ್ಲದೆ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಾಗಿದೆ. ಇಂಥ ಎಷ್ಟೋ ಘಟನೆಗಳು ನದಿ ದಂಡೆಯಲ್ಲಿ ಹಿಂದೆಲ್ಲ ನಡೆದಿವೆ. ಇದಲ್ಲದೆ ಫಲವತ್ತಾದ ಮಣ್ಣನ್ನು ಕಳ್ಳತನದಿಂದ ಸಾಗಿಸುತ್ತಿರುವುದರಿಂದ ಪಂಚಾಯಿತಿ ಅಥವಾ ಕಂದಾಯ ಇಲಾಖೆಗೆ ಬರಬೇಕಾದ ರಾಯಲ್ಟಿ ರೂಪದ ಶುಲ್ಕವೂ ಬರದೆ ವಂಚನೆ ಆಗತೊಡಗಿದೆ. ಸರ್ಕಾರಕ್ಕೆ ಬರಬೇಕಾದರ ಆದಾಯ ಅಕ್ರಮ ದಂಧೆಕೋರರ ಪಾಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇಂಥ ಅಕ್ರಮ ದಂಧೆ ತಡೆದು ಕಾನೂನು ಪ್ರಕಾರ ಕ್ರಮ ಕೈಕೊಳ್ಳದಿದ್ದರೆ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಂಗಡಗಿ ಭಾಗದಿಂದ ಕೊನೇ ಹಳ್ಳಿ ಅಯ್ಯನಗುಡಿಯವರೆಗೂ ಅಕ್ರಮವಾಗಿ ಎರೆಮಣ್ಣು, ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇವುಗಳ ಮತ್ತು ತಡೆಯಲು ಹೋದವರಿಗೆ ಧಮಕಿ ಹಾಕಿರುವ ವಿಡಿಯೋ ದೃಶ್ಯಾವಳಿ ನಮ್ಮ ಬಳಿ ಇದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷ್ಪಕ್ಷಪಾತವಾಗಿ ಕ್ರಮಕ್ಕೆ ಮುಂದಾದಲ್ಲಿ ಅವರಿಗೆ ಹಸ್ತಾಂತರಿಸುತ್ತೇವೆ.
-ಸಂಗಯ್ಯ ಸಾರಂಗಮಠ
ಅಧ್ಯಕ್ಷರು, ಕರವೇ ಸ್ವಾಭಿಮಾನಿ ಬಣ, ಮುದ್ದೇಬಿಹಾಳ.