ಆಪರೇಷನ್ ಸಿಂಧೂರದ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕನನ್ನು ಅನರ್ಹಗೊಳಿಸಬೇಕು..! ಕಾರಜೋಳ
ವಿಜಯಪುರ : ಮಾನವೀಯತೆ ಶತ್ರುಗಳಾಗಿರುವ ಉಗ್ರಗಾಮಿಗಳ ಸಂಹಾರಕ್ಕಾಗಿ ನಮ್ಮ ವೀರ ಸೈನಿಕರು ನಡೆಸಿದ ಆಪರೇಷನ್ ಸಿಂಧೂರದ ಬಗ್ಗೆ ಹಗುರವಾಗಿ ಮಾತನಾಡಿರುವ ಕಾಂಗ್ರೆಸ್ ಶಾಸಕನ ಹೆಸರು ಹೇಳಲು ಸಹ ಮನಸ್ಸಾಗುತ್ತಿಲ್ಲ, ದೇಶದ ಬಗ್ಗೆ, ಹೆಮ್ಮೆಯ ಯೋಧರ ಬಗ್ಗೆ ಗೌರವವಿಲ್ಲದ ಈ ವ್ಯಕ್ತಿ ಹೆಸರು ತೆಗೆದುಕೊಳ್ಳುವ ಮನಸ್ಸಾಗುತ್ತಿಲ್ಲ, ಕೂಡಲೇ ಈ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ಮಾಧ್ಯಮದವರು ಸಹ ಈ ವ್ಯಕ್ತಿಗೆ ಶಾಶ್ವತ ಬಹಿಷ್ಕಾರ ಹಾಕಬೇಕು ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಗ್ರಗಾಮಿಗಳನ್ನು ನಿರ್ನಾಮ ಮಾಡಲು ಜೀವವನ್ನೇ ಪಣಕ್ಕಿಟ್ಟಿರುವ ನಮ್ಮ ಸೈನಿಕರ ಬಗ್ಗೆ ಅವರ ಆಪರೇಷನ್ ಬಗ್ಗೆ ಹಗುರವಾಗಿ ಮಾತನಾಡಿದರೆ ರಕ್ತ ಕುದಿಯುತ್ತದೆ, ಕಾರ್ಯಾಚರಣೆಯನ್ನು ಬೂಟಾಟಿಕೆ ಎಂದು ಕರೆದಿರುವ ಈ ಶಾಸಕನ ಹೇಳಿಕೆ ಸಮಸ್ತ ಭಾರತೀಯರಿಗೂ ನೋವು ತಂದಿದೆ, ನಮಗಾಗಿ ತ್ಯಾಗ ಮಾಡುವ ಮಹಾನ್ ಜೀವಿಗಳಾದ ಸೈನಿಕರ ಕಾರ್ಯಾಚರಣೆ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಯಾರೂ ಸಹಿಸುವುದಿಲ್ಲ, ಹೀಗಾಗಿ ಕೂಡಲೇ ಈ ವ್ಯಕ್ತಿಯನ್ನು ಶಾಸಕ ಸ್ಥಾನದಿಂಸ ಅನರ್ಹಗೊಳಿಸಬೇಕು, ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧೆ ಮಾಡದಂತೆ ಶಾಶ್ವತ ನಿಷೇಧ ಹೇರಬೇಕು, ಸಮಾಜದಲ್ಲಿ ಸೈನಿಕರ ಬಗ್ಗೆ ಅಗೌರವ ಬಿತ್ತುವ ಇಂತಹ ವ್ಯಕ್ತಿಗಳ ಹೇಳಿಕೆಗಳನ್ನು ಸಹ ಮಾಧ್ಯಮ ಬಾಂಧವರು ಪ್ರಸಾರ ಮಾಡದೇ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.