ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯ ಶ್ಲಾಘನೀಯ
ವಿಜಯಪುರ: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿರುವ ಮರಾಠಾ ಸಮಾಜದ ಯುವಕ ಶಿವಾಜಿ (ಶುಭಂ) ಸಂಕಪಾಲ ಹಾಗೂ ಗಾಯಗೊಂಡ ಯುವಕನ ಮನೆಗೆ ನಗರ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ರಾ.ಪಾಟೀಲ ಯತ್ನಾಳ ರವರು ಈಚೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ನೌಕರಿ ಹಾಗೂ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿರುವುದು ಶ್ಲಾಘನೀಯ ಕಾರ್ಯ ಎಂದು ಮರಾಠಾ ಸಮಾಜದ ಕಾರ್ಯದರ್ಶಿಯೂ ಆದ ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಕಸ್ಮೀಕವಾಗಿ ದುರ್ಘಟನೆ ನಡೆದ ತಕ್ಷಣವೇ ಎಲ್ಲ ಗಜಾನನ ಮಂಡಳಿಗಳು ಮೆರವಣಿಗೆ ಸ್ತಗೀತಗೊಳಿಸಿ, ಮೌನಾಚರಣೆ ನಡೆಸಿ, ಯುವಕನ ಆತ್ಮಕ್ಕೆ ಶಾಂತಿ ಕೋರಲಾಗಿತ್ತು. ಮೃತ ಯುವಕ ಮತ್ತು ಗಾಯಗೊಂಡವರ ಮನೆಗೆ ಶಾಸಕರು ಭೇಟಿ ನೀಡಿ, ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟಲ್ಲಿರುವ ಕುಟುಂಬಕ್ಕೆ ನೆರವಾಗಲು, ಬಿಕಾಂ ಪದವಿಧರೆ ಆಗಿರುವ ಮೃತ ಯುವಕನ ಸಹೋದರಿ ಮೋನಿಕಾ ಸಂಕಪಾಲ ಅವರಿಗೆ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಂಡು, ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುವುದಾಗಿ ತಿಳಿಸಿದರು. ಅದೇ ರೀತಿ ಗಾಯಗೊಂಡ ಯುವಕನಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ತಿಳಿಸಿದ ಮಾನ್ಯ ಶಾಸಕರಿಗೆ ಮರಾಠಾ ಸಮುದಾಯ ಪರವಾಗಿ ಅನಂತಕೋಟಿ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳ: ವಿಜಯಪುರ ದಿನಾಂಕ: 10-9-2025 ರಾಹುಲ್ ಜಾಧವ ಕಾರ್ಯದರ್ಶಿಗಳು, (ಮರಾಠಾ ಸಮಾಜ) ಮಹಾನಗರ ಪಾಲಿಕೆ ಸದಸ್ಯರು, ವಿಜಯಪುರ


















