ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ: ಭಕ್ತರಿಗೆ ಅಚ್ಚರಿ ಮೂಡಿಸಿತು
ಡೊಂಕಮಡು ಗ್ರಾಮದ ಗಿರಿಯಪ್ಪ ಮುತ್ಯಾನ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೈಮನ ರೋಮಾಂಚನ.
ವಿಶೇಷ ವರದಿ : ಬಸವರಾಜ ಈ ಕುಂಬಾರ , ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ಡೊಂಕಮಡು ಗ್ರಾಮದಲ್ಲಿ ಮಂಗಳವಾರ ಜರುಗಿದ ಗಿರಿಯಪ್ಪ ಮುತ್ಯಾನ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೈಮನ ರೋಮಾಂಚನಗೊಳಿಸುವ ಪವಾಡವೊಂದು ಜರುಗಿದೆ. ಕುದಿಯುವ ಅನ್ನ ಮತ್ತು ಪಾಯಸದ ಬೋಗೋಣಿಗೆ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅವರು ಬರಿಗೈ ಹಾಕಿ ಪ್ರಸಾದ ಹೊರತೆಗೆಯುವ ಮೂಲಕ ಸಾವಿರಾರು ಭಕ್ತರಲ್ಲಿ ಅಚ್ಚರಿ ಮೂಡಿಸಿದರು.
ಜಾತ್ರೆಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಡೊಳ್ಳಿನ ನಿನಾದದ ಮಧ್ಯೆ ದೇವವಾಣಿ ನುಡಿಯಲಾಯಿತು. ಬಳಿಕ ಭಕ್ತರಿಗೆ ಅನ್ನಪ್ರಸಾದ ಸಿದ್ಧಪಡಿಸುತ್ತಿದ್ದ ಸ್ಥಳಕ್ಕೆ ಭಕ್ತರೊಂದಿಗೆ ಆಗಮಿಸಿದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅವರು, ಒಲೆಯ ಮೇಲೆ ಕುದಿಯುತ್ತಿದ್ದ ಅನ್ನ, ಸಾರು ಹಾಗೂ ಬಾಳೆಹಣ್ಣಿನ ಸಿಕಣಿ ಪಾಯಸದ ಬೋಗೋಣಿಗಳಿಗೆ ಕೈಹಾಕಿ ಬೊಗಸೆಗಟ್ಟಲೆ ಪ್ರಸಾದವನ್ನು ತಟ್ಟೆಗೆ ತೆಗೆದರು. ಕುದಿಯುವ ಬಿಸಿಯನ್ನೂ ಲೆಕ್ಕಿಸದೆ ಅವರು ಮಾಡಿದ ಈ ಕಾರ್ಯವನ್ನು ಕಂಡ ಭಕ್ತರು “ಗಿರಿಯಪ್ಪ ಮುತ್ಯಾನಿಗೆ ಜಯವಾಗಲಿ” ಎಂದು ಜಯಘೋಷ ಹಾಕಿದರು.
ಇದೇ ವೇಳೆ ದೇವವಾಣಿ ನುಡಿದ ಬಸಪ್ಪ, ಅಜ್ಜನವರು”ಈ ವರ್ಷ ಮಳೆ-ಬೆಳೆ ಉತ್ತಮವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಬಂಗಾರದ ಹೊಗೆ ಏಳಲಿದೆ” ಎಂದು ಭವಿಷ್ಯ ನುಡಿದರು. ಇದು ರೈತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ಕಾಯಿಲೆ ವಾಸಿ ಮಾಡುವ ಗಿರಿಯಪ್ಪ ಮುತ್ಯಾ:
ಗಿರಿಯಪ್ಪ ಮುತ್ಯಾನ ಪವಾಡ ಅಪಾರವಾಗಿದ್ದು, ಇಲ್ಲಿಗೆ ಬರುವ ಭಕ್ತರ ದೀರ್ಘಕಾಲದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಅಚಲ ನಂಬಿಕೆಯಿದೆ. ಈ ಬಾರಿಯ ಜಾತ್ರೆಗೆ ಮುದ್ದೇಬಿಹಾಳ, ತಾಳಿಕೋಟಿ, ಹುಣಸಗಿ ಸೇರಿದಂತೆ ಅಡವಿ ಸೋಮನಾಳ, ಅಡವಿ ಹುಲಗಬಾಳ, ಚವನಬಾವಿ, ಕ್ಯಾತನಡೋಣಿ, ಶಿವಪೂರ ಹಾಗೂ ನೆರೆಯ ಜಿಲ್ಲೆಗಳಾದ ಬಸಾಪೂರ, ಮನ್ಯಾಳ, ಬಪ್ಪರಗಿ, ಕುರೇಕನಾಳ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಗ್ರಾಮದ ಸಮಸ್ತ ದೈವ ಮಂಡಳಿ ಹಾಗೂ ಸದ್ಭಕ್ತ ಮಂಡಳಿಯವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಭಾಗವಹಿಸಿದ್ದರು.