ಮುದ್ದೇಬಿಹಾಳ: ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಅಡುಗೆ ಅನಿಲ (LPG) ಬೆಲೆ ಏರಿಕೆಯನ್ನು ಖಂಡಿಸಿ ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಎನ್ ಎಸ್ ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಸಂಘಟನೆಗಳ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅಮೇರಿಕಾದ ಬಂಡವಾಳಶಾಹಿಗಳ ಮುಂದೆ ಮಂಡಿಯೂರಿ ಶರಣಾಗಿರುವ ಕೇಂದ್ರದ ವಿಫಲ ವಿದೇಶಾಂಗ ನೀತಿ ಹಾಗೂ ಎಪ್ಸ್ಟೀನ್ ಫೈಲ್ಸ್ (Epstein files) ವಿಚಾರದಲ್ಲಿ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, “ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೇವಲ ಬಂಡವಾಳಶಾಹಿಗಳ ಪರವಾಗಿದೆ. ಬಡವರ ಅಡುಗೆ ಮನೆಯ ಗ್ಯಾಸ್ ಬೆಲೆ ಏರಿಸಿ ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ” ಎಂದರು.
ಮುದ್ದೇಬಿಹಾಳ ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಅಕ್ಷತಾ ಚಲವಾದಿ ಮಾತನಾಡಿ, “ಗೃಹಿಣಿಯರು ಸಂಸಾರ ನಡೆಸುವುದು ಕಷ್ಟವಾಗಿದೆ. ಬೆಲೆ ಏರಿಕೆಯನ್ನು ತಕ್ಷಣ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಸವರಾಜ ಬಂಜೆತ್ರಿ, ಮಹಿಳಾ ಕಾಂಗ್ರೆಸ್ ನಾಯಕಿ ಸುಜಾತಾ ಶಿಂಧೆ, ಮುದ್ದೇಬಿಹಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪಾಟೀಲ್ ಹಾಗೂ ಮಹಾಬುಬಿ ಬಾಗವಾನ ಅವರು ಸರ್ಕಾರದ ವೈಫಲ್ಯಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಿತ ಸದಸ್ಯ ರಫೀಕ್ ಶಿರೋಳ, ಮುಖಂಡರಾದ ಸಮೀರ್ ದ್ರಾಕ್ಷಿ, ರಾಮಣ್ಣಾ ನಾಯಕಮಕ್ಕಳ, ಅಬೂಬಕರ್ ಹಡಗಲಿ, ಕಾಯುಮ್ ಮೊಮಿನ್, ಬಸವರಾಜ ಚಲವಾದಿ, ಚಂದ್ರು ಚಲವಾದಿ, ಯಮನಪ್ಪ, ಅಭಿ ಕಲಾಲ, ಅಬ್ದುಲ್ ಸಲಾಂ ಮುಲ್ಲಾ, ಬಂಧು ಮ್ಯಾಗೇರಿ, ಮಂಜುನಾಥ ಮುರಾಳ, ಪ್ರದೀಪ್ ರಾಥೋಡ್, ಇನಾಯತ್ ಮೊಮಿನ್, ರಾಜು ಪಾಟೀಲ್, ಶೇಖರ್ ಬಿರಾದಾರ,ಮಹಿಳಾ ಕಾಂಗ್ರೆಸ್ ನಾಯಕಿಯರಾದ ಶೋಭಾ ಶೇಳ್ಳಗಿ, ಕಮಲಾ ಬಂಜೆತ್ರಿ, ನಿಲ್ಲಮ್ಮಾ ಚಲವಾದಿ, ಮಮ್ತಾಜ್ ಮುಲ್ಲಾ, ಶಿವಲೀಲಾ ಬಸರಕೋಡ, ಹೀನಾ ಮೂಲಿಮನಿ, ಹಸೀನಾ ನಿಡಗುಂದಿ, ಹಫೀಜಾ ಜಮಾದಾರ್, ನಿಲ್ಲಮ್ಮಾ ಮಹಾಲಿಂಗಪುರ, ದೇವಮ್ಮಾ ಹುಣಕುಂಟಿ, ಮಾಹಬೂಬಿ ನಾಯ್ಕೋಡಿ, ಬಸಮ್ಮಾ ಯರಗಲ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
© 2026 VOJNews - Powered By Kalahamsa Infotech Private Limited.