ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ:5ನೇ ಹೆಚ್ಚುವರಿ ಜಿಲ್ಲಾ ಸತ್ರ ಮುದ್ದೇಬಿಹಾಳ ನ್ಯಾಯಾಲಯದ ಮಹತ್ವದ ತೀರ್ಪು
ಮುದ್ದೇಬಿಹಾಳ: ಪತ್ನಿಯ ಶೀಲದ ಮೇಲೆ ಸಂಶಯಪಟ್ಟು ಆಕೆಯನ್ನು ಕ್ರೂರವಾಗಿ ಹತ್ಯೆಗೈದ ಆರೋಪಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1.5 ಲಕ್ಷ ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ತಾಲೂಕಿನ ಅಬ್ಬೀಹಾಳ ಗ್ರಾಮದ ಲಕ್ಷ್ಮಣ ಕಾರಕೂರ ಶಿಕ್ಷೆಗೊಳಗಾದ ಅಪರಾಧಿ.5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಶ್ರೀ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಆರೋಪಿ ಲಕ್ಷ್ಮಣ ತನ್ನ ಪತ್ನಿಯ ನಡತೆಯ ಮೇಲೆ ಸದಾ ಸಂಶಯ ಪಡುತ್ತಿದ್ದನು. ಈ ವಿಚಾರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಕಾರಣ, ಮೃತ ಮಹಿಳೆಯು ತನ್ನ ಅಪ್ರಾಪ್ತ ಮಗನೊಂದಿಗೆ ತವರು ಮನೆಗೆ ತೆರಳಿ ವಾಸವಾಗಿದ್ದಳು. ಇದರಿಂದ ಕೆರಳಿದ ಆರೋಪಿ, ಪತ್ನಿಯ ತವರು ಮನೆಗೆ ನುಗ್ಗಿ ಹೊಲಿಗೆ ಯಂತ್ರದಿಂದ ಆಕೆಯ ತಲೆಯ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದನು.
ಮಗನ ಸಾಕ್ಷ್ಯವೇ ಪ್ರಮುಖ ತಿರುವು:
ಈ ಪ್ರಕರಣದಲ್ಲಿ ಕಣ್ಣಾರೆ ಕಂಡ ಸಾಕ್ಷಿಯಾಗಿದ್ದ ಅಪ್ರಾಪ್ತ ಮಗ, ತನ್ನ ತಂದೆಯ ವಿರುದ್ಧವೇ ಧೈರ್ಯದಿಂದ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾನೆ. ಮಗನ ಹೇಳಿಕೆಯನ್ನು ಅತ್ಯಂತ ನಂಬಿಕಾರ್ಹವೆಂದು ಪರಿಗಣಿಸಿದ ನ್ಯಾಯಾಲಯ, ಇಂತಹ ಕ್ರೂರ ಕೃತ್ಯಕ್ಕೆ ಯಾವುದೇ ಸಡಿಲಿಕೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದೆ.
ಶಿಕ್ಷೆಯ ವಿವರ: ಜೀವಾವಧಿ ಶಿಕ್ಷೆ: ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್ 103(1) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ದಂಡದ ಮೊತ್ತ: 1.5 ಲಕ್ಷ ರೂಪಾಯಿ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 1.5 ವರ್ಷ ಕಠಿಣ ಕಾರಾಗೃಹ ಶಿಕ್ಷೆ.
ಪರಿಹಾರ: ದಂಡದ ಮೊತ್ತದಲ್ಲಿ 1.30 ಲಕ್ಷ ರೂಪಾಯಿಯನ್ನು ಅನಾಥವಾಗಿರುವ ಮೃತರ ಅಪ್ರಾಪ್ತ ಮಗನಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ತನಿಖಾ ತಂಡದ ಶ್ರಮ: ಸಿಪಿಐ (ಪ್ರಸ್ತುತ ಲೋಕಾಯುಕ್ತ ಡಿವೈಎಸ್ಪಿ) ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐಗಳಾದ ಗುರುಶಾಂತ ದಾಶ್ಯಾಳ ಹಾಗೂ ಸಂಜಯ ತಿಪರೆಡ್ಡಿ ಅವರು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಮಾಮನಿ ಅವರು ವಾದ ಮಂಡಿಸಿದ್ದರು.
ಸದ್ಯ ತಾಯಿಯನ್ನು ಕಳೆದುಕೊಂಡು, ತಂದೆ ಜೈಲು ಪಾಲಾದ ಹಿನ್ನೆಲೆಯಲ್ಲಿ ಮಗು ಅಜ್ಜಿಯ ಆಶ್ರಯದಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದೆ.


















