ರಾಯಚೂರು: ಗ್ರಾಮೀಣ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿಯ ಪ್ರಕರಣವೊಂದು ಈಗ ದಾಖಲೆಗಳ ಸಹಿತ ಮಾನ್ವಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಮಾನ್ವಿ ವಿಭಾಗದಲ್ಲಿ ಈ ಭ್ರಷ್ಟಾಚಾರ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಬಿಲ್ ಪಾವತಿಸಿ, ದೂರು ನೀಡಿದ ನಂತರ ಕಳಪೆ ಕಾಮಗಾರಿ ನಿರ್ವಹಿಸಿ, ಸುಮಾರು ೭೫ ಲಕ್ಷ ರೂ. ಹಣ ಗುಳುಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಡೋಣಮರಡಿ, ಹೀರಾ ಕೂಡು ರಸ್ತೆ ಕಾಮಗಾರಿಗೆ ೬೫ ಲಕ್ಷ ಮತ್ತು ಡೋಣಮರಡಿ (ಹೆಚ್) ಗ್ರಾಮದ ಕೂಡು ರಸ್ತೆಗೆ ೧೦ ಲಕ್ಷ ಸೇರಿ ಒಟ್ಟು ೭೫ ಲಕ್ಷ ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಈ ಕಾಮಗಾರಿಯನ್ನು ಕೈಗೊಳ್ಳದ ಪೂರ್ವ ಗುತ್ತೇದಾರರಿಗೆ ಬಿಲ್ ಪಾವತಿಸಿ, ಭಾರೀ ಅವ್ಯವಹಾರ ವೆಸಗಿರುವ ಬಗ್ಗೆ ಶರಣಬಸ್ಸಪ್ಪ ಎಂಬುವವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಗುತ್ತೇದಾರರಿಗೆ ೭-೧೦-೨೦೨೧ ರಲ್ಲಿ ಬಿಲ್ ಪಾವತಿಸಲಾಗಿದೆ. ಆದರೆ, ಈ ಕಾಮಗಾರಿ ಮಾತ್ರ ಕೈಗೊಂಡಿರಲಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ ನಂತರ ಉದ್ದೇಶಿತ ಕಾಮಗಾರಿ ಕಳಪೆ ಗುಣಮಟ್ಟದಿಂದ ನಿರ್ವಹಿಸಲಾಗಿದೆ. ಮಾನ್ವಿ ಜಿಲ್ಲಾ ಪಂಚಾಯತ ಉಪ ವಿಭಾಗದಿಂದ ೨೫-೨-೨೦೨೧ ರಂದು ಕಾಮಗಾರಿ ಪೂರ್ಣಗೊಂಡಿರುವುದಾಗಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಅಂದು ಆ ಕಾಮಗಾರಿ ಕೈಗೊಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಜಿಪಿಎಸ್ ಮೂಲಕ ಕಾಮಗಾರಿ ದಾಖಲಿಸಲು ಬೇರೆ ಎಲ್ಲೋ ನಡೆದಂತಹ ಭಾವಚಿತ್ರವನ್ನು ಉದ್ದೇಶಿತ ಕಾಮಗಾರಿ ಸ್ಥಳದಲ್ಲಿರಿಸಿ, ಜಿಪಿಎಸ್ ಮಾಡಲಾಗಿತ್ತು. ಈ ರೀತಿ ರಾಜ್ಯ ಸರ್ಕಾರದ ಹಣವನ್ನು ಗುತ್ತೇದಾರರು ಮತ್ತು ಉಪ ವಿಭಾಗದ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎನ್ನುವುದು ಪ್ರಮುಖ ಆರೋಪವಾಗಿದೆ. ಈ ದಾಖಲೆಗಳನ್ನು ಪರಿಶೀಲಿಸಿದಾಗ ೭-೧೦-೨೦೨೧ ರಂದು ಬಿಲ್ ನಂಬರ್ ೩೪೩ ಅಡಿ ಒಟ್ಟು ೯.೯೩ ಲಕ್ಷ, ೨೩.೭೩ ಲಕ್ಷ ಹಾಗೂ ೧೮.೧೬ ಲಕ್ಷ ರೂ. ಗುತ್ತೇದಾರರಿಗೆ ಪಾವತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉತ್ತಮ ರಸ್ತೆ ನೀಡುವ ಉದ್ದೇಶದಿಂದ ಈ ಯೋಜನೆ ಗುತ್ತೇದಾರರ ಅನುಕಾಲಕ್ಕಾಗಿ ದುರುಪಯೋಗ ಪಡೆಸಿಕೊಳ್ಳಲಾಗಿದೆ. ಈ ಬಗ್ಗೆ ಇನ್ನೂವರೆಗೂ ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಕೆಳ ಮಟ್ಟದಿಂದ ಮೇಲ್ಮಟದವರೆಗೂ ಈ ಅವ್ಯವಹಾರಲ್ಲಿ ಎಲ್ಲರೂ ಭಾಗೀಗಳು ಎಂಬ ಭಾವನೆ ಮೂಡುವಂತೆ ಮಾಡಿದೆ.