ಕುವೆಂಪು ಸಾಹಿತ್ಯ ಮಾನವೀಯ ಮೌಲ್ಯಗಳ ಸಂಕೇತ-
ಸಂತೋಷ ಬಂಡೆ
ಇಂಡಿ:ಕುವೆಂಪು ಸಾಹಿತ್ಯವು ವಿಶ್ವಮಾನವ ಸಂದೇಶ, ಪ್ರಕೃತಿ ಪ್ರೇಮ, ವೈಚಾರಿಕತೆ, ಸಾಮಾಜಿಕ ಸಮಾನತೆ, ಶಿಕ್ಷಣದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪುರವರ ಜಯಂತಿ ನಿಮಿತ್ತ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆ ಉದ್ಧೇಶಿಸಿ ಅವರು ಮಾತನಾಡಿದರು.
ಜಾತಿ, ಮತ, ಪಂಥಗಳ ಭೇದಭಾವಗಳನ್ನು ತಿರಸ್ಕರಿಸಿ, ಸರ್ವೋದಯ, ಸಮಾನತೆ ಸಾರುವ “ಮನುಷ್ಯಜಾತಿ ತಾನೊಂದೇ ವಲಂ” ಎಂಬ ತತ್ವವನ್ನು ಎತ್ತಿಹಿಡಿದ ಕುವೆಂಪುರವರ ಸಾಹಿತ್ಯವು ಇಂದಿಗೂ ಪ್ರಸ್ತುತವಾಗಿದ್ದು, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ಕುವೆಂಪುರವರ ಸಾಹಿತ್ಯ ಮಕ್ಕಳಿಗೆ ಜಾತಿ, ಧರ್ಮದ ಕಟ್ಟುಪಾಡುಗಳಿಲ್ಲದ ಮುಕ್ತ ಮನೋಭಾವ, ಪ್ರಕೃತಿಯೊಂದಿಗೆ ಬೆರೆಯುವ ಸಹಜತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಕಲಿಸುತ್ತದೆ. ಇದರಿಂದ ಮಕ್ಕಳು ಸ್ವತಂತ್ರ, ಸಮತಾವಾದಿ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಹಿರಿಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,
ವಿಶ್ವಮಾನವ ಎಂದು ಖ್ಯಾತಿ ಪಡೆದ ಕುವೆಂಪು ಅವರ ಸಾಹಿತ್ಯ ಕೃತಿಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ. ತಮ್ಮ ಅದ್ಭುತ ಚಿಂತನೆಗಳನ್ನು ಬರಹಗಳ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶ ನೀಡಿ ಅಜಾರಮರವಾಗಿ ಉಳಿದಿದ್ದಾರೆ’ ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಬೇಗಂ ಮುಲ್ಲಾ,ಕಮಲವ್ವ ದಳವಾಯಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.


















