ಪೋಷಕರ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ: 120ಕ್ಕೂ ಹೆಚ್ಚು ಜನರಿಗೆ ತಪಾಸಣೆ
ಮುದ್ದೇಬಿಹಾಳ: “ತಂದೆ-ತಾಯಿಯರ ಸ್ಮರಣಾರ್ಥ ಮಕ್ಕಳು ಮಾಡುವ ಸಮಾಜಮುಖಿ ಕಾರ್ಯಗಳು ಭಗವಂತನಿಗೆ ಪ್ರಿಯವಾಗುತ್ತವೆ. ಇಂತಹ ಸತ್ಕಾರ್ಯಗಳು ಇಡೀ ಸಮಾಜಕ್ಕೆ ಮಾದರಿಯಾಗಬಲ್ಲವು,” ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಲತವಾಡ ಹೇಳಿದರು.
ಇಲ್ಲಿನ ಫಕೀರೇಶ್ವರ ಡೈಗ್ನಾಸ್ಟಿಕ್ ಸೆಂಟರ್ ಆವರಣದಲ್ಲಿ ಫಕೀರೇಶ್ವರ ವಿವಿಧೋದ್ದೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್ ಜಾನ್ ಆಂಬ್ಯೂಲೆನ್ಸ್ ತಾಲೂಕು ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ದಿ. ಡಾ. ಕೂಡ್ಲಯ್ಯ ಘಟವಾಳಯ್ಯ ಶಿವಯೋಗಿಮಠ ಮತ್ತು ದಿ. ಬೋರಮ್ಮ ಶಿವಶರಣಯ್ಯ ಶಿವಯೋಗಿಮಠ ಅವರ ಸ್ಮರಣಾರ್ಥ ಈ ಶಿಬಿರ ಆಯೋಜಿಸಲಾಗಿತ್ತು. ಈ ಕುರಿತು ಮಾತನಾಡಿದ ನಾಲತವಾಡ ಅವರು, “ಡಾ. ಕೂಡ್ಲಯ್ಯ ಶಿವಯೋಗಿಮಠ ಅವರು ಈ ಭಾಗದ ಖ್ಯಾತ ವೈದ್ಯರಾಗಿದ್ದರು. ಅವರ ಮಕ್ಕಳು ಕೂಡ ತಂದೆಯವರ ಹಾದಿಯಲ್ಲೇ ನಡೆದು, ಆರೋಗ್ಯ ಸೇವೆ ತುಟ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ಬಡವರ ಹಿತಕ್ಕಾಗಿ ಉಚಿತ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ,” ಎಂದರು.
ಸಾನಿಧ್ಯ ವಹಿಸಿದ್ದ ಲೊಟಗೇರಿಯ ಗುರುಮೂರ್ತಿದೇವರು ಕಣಕಾಲಮಠ ಮಾತನಾಡಿ, “ಮಹಿಳೆಯರು ಮತ್ತು ಹಿರಿಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸದೃಢ ಸಮಾಜ ನಿರ್ಮಾಣಕ್ಕೆ ಯುವಜನಾಂಗವು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ,” ಎಂದು ಕಿವಿಮಾತು ಹೇಳಿದರು.
ಬಸವ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆಯ 120ಕ್ಕೂ ಹೆಚ್ಚು ಸದಸ್ಯರಿಗೆ ತಪಾಸಣೆ ಮಾಡಲಾಯಿತು.
ಮಧುಮೇಹ (Diabetes), ರಕ್ತದೊತ್ತಡ (BP) ಹಾಗೂ ಹೃದಯ ಸಂಬಂಧಿತ ಇಸಿಜಿ (ECG) ತಪಾಸಣೆ ನಡೆಸಿ ಉಚಿತ ವೈದ್ಯಕೀಯ ಸಲಹೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಖಾ ಶಿವಯೋಗಿಮಠ ವಹಿಸಿದ್ದರು. ಮುದ್ದೇಬಿಹಾಳದ ಖಾಸತೇಶ್ವರ ನೀಲಮ್ಮತಾಯಿ ವಿರಕ್ತಮಠದ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ, ಹಿರಿಯ ವೈದ್ಯರಾದ ಡಾ. ಎ.ಎ. ಮುಲ್ಲಾ, ಡಾ. ರೇವಣಸಿದ್ದ ಮಸೂತಿ, ಡಾ. ವೀರೇಶ ಪಾಟೀಲ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ದಾನಯ್ಯ ಹಿರೇಮಠ, ಕಾಶೀಬಾಯಿ ರಾಂಪುರ, ವಿರೂಪಾಕ್ಷಿ ಪತ್ತಾರ, ಶಾಂತಯ್ಯ ಶಿವಯೋಗಿಮಠ ಹಾಗೂ ಸಂಗಮೇಶ ಮೇಲಿನಮನಿ ಉಪಸ್ಥಿತರಿದ್ದರು.