ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ
ವಿಜಯಪುರ : ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪಾಲಿಕೆಯ ವ್ಯಾಪ್ತಿಯ ಇಂಡಿ ರಸ್ತೆಯಲ್ಲಿರುವ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿ ಕಸ ಪ್ರತ್ಯೇಕಿಸುವ ಯಂತ್ರದ ಅಳವಡಿಕೆಯ ಕಾಮಗಾರಿ ಆದಷ್ಟು ಬೇಗನೆ ಯಂತ್ರದ ಅಳವಡಿಕೆ ಕೆಲಸ ಪೂರ್ಣಗೊಳಿಸಬೇಕು ಹಾಗೂ ಈ ಸ್ಥಳದಲ್ಲಿರುವ ಘನ ತ್ಯಾಜ್ಯ ಕೂಡಲೇ ವಿಲೇವಾರಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ ಮತ್ತು ಸುತ್ತಮುತ್ತಲಿನ ಗಿಡ ಮರಗಳಿಗೆ ಬೇಸಿಗೆ ಕಾಲದಲ್ಲಿ ಸರಿಯಾಗಿ ನೀರು ಒದಗಿಸಿ ಪರಿಸರ ಕಾಳಜಿವಹಿಸಬೇಕು ಎಂದು ಪಾಲಿಕೆ ಪರಿಸರ ಅಭಿಯಂತರರಾದ ಅಶೋಕ ಸಜ್ಜನ ಅವರಿಗೆ ಸೂಚಿಸಿದರು.
ಹಂಚನಾಳ ತಾಂಡಾ ಹತ್ತಿರ ಇರುವ ಕೆರೆಗೆ ಭೇಟಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದಂತೆ,ಕೆರೆಯ ನೀರಿಗೆ ಕೆಮಿಕಲ್ ಟ್ರೇಟ್ಮೆಂಟ್ ಮಾಡಬೇಕು ಹಾಗೂ ಒಳಚರಂಡಿ ನೀರು ವೈಜ್ಞಾನಿಕವಾಗಿ ಸ್ವಚ್ಚಗೊಳಿಸುವ ಬಗ್ಗೆ ಕ್ರಮವಹಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಬರಟಗಿ ಹತ್ತಿರ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ, ಪೂರ್ಣಗೊಂಡ ಕಟ್ಟಡಗಳಲ್ಲಿ ಬಾಕಿ ಇರುವ ದುರಸ್ತಿ ಕಾರ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನಿರ್ವಹಿಸಿ ಅವುಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಕಲ್ಪಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ನಗರದ ಅಲ್ ಅಮಿನ್ ಕಾಲೇಜಿನ ಹತ್ತಿರ ಇರುವ ನಮೋ ನಗರದಲ್ಲಿ ನಿರ್ಮಾಣ ಆಗುತ್ತಿರುವ ಗುಂಪು ಮನೆ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಯನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು
ಸಂಬಂಧಿಸಿದ ಗುತ್ತಿಗೆದಾರರಿಗೆ ಹಾಗೂ ಪಾಲಿಕೆಯ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು. ಅಥಣಿ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಕುಲಕರ್ಣಿ ಬಡಾವಣೆಯಲ್ಲಿರುವ ಒಳಚರಂಡಿ ಪರಿಶೀಲಿಸಿದ ಅವರು, ಪಾಲಿಕೆಯ ವಿದ್ಯುತ್ ಅಭಿಯಂತರರಿಗೆ ನೀರೆತ್ತುವ ಮೋಟಾರ್ಗಳು ಹಾಳಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಬದ್ರುದ್ದಿನ್ ಸೌದಾಗರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಿಕಿ ಪಾಲಿಕೆಯ ಕಾರ್ಯ ನಿರ್ವಾಹಕ ಅಭಿಯಂತರ ಎಂ.ಸಿ. ಡೊಳ್ಳಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ವಿ.ಎನ್. ನ್ಯಾಮಗೊಂಡ, ಪಾಲಿಕೆಯ ಸಹಾಯಕ ಅಭಿಯಂತರ ಸುನೀಲ್ ಪಾಟೀಲ, ಸುನೀಲ್ ಹಿರೆಣ್ಣಿ, ಅನೀಲ್ ರಾಠೋಡ್ ಹಾಗೂ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಉಪಸ್ಥಿತರಿದ್ದರು.