ಚವನಭಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಜಲಜೀವನ್ ಮಿಷನ್ ಇದ್ದರೂ ತಪ್ಪದ ‘ಹನಿ’ ನೀರಿಗೂ ಪರದಾಟ!
ಬತ್ತಿದ ಬಾವಿ, ಕೆಟ್ಟ ಕೈಪಂಪ್: ಕಿಲೋಮೀಟರ್ ಅಲೆದರೂ ಸಿಗದ ನೀರು; ಚವನಭಾವಿ ಗ್ರಾಮಸ್ಥರು ಆಕ್ರೋಶ.
ವಿಶೇಷ ವರದಿ ಬಸವರಾಜ ಈ ಕುಂಬಾರ
ಮುದ್ದೇಬಿಹಾಳ: ತಾಲೂಕಿನ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರ ಸ್ವರೂಪ ಪಡೆದಿದೆ. ಸುಮಾರು 3000- 4000 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಜಲ ಮೂಲಗಳ ಕೊರತೆಯಿಂದಾಗಿ ಜನರು ಒಂದು ಬಿಂದಿಗೆ ನೀರಿಗಾಗಿ ಮೈಲುಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೇ ಕೊಳವೆ ಬಾವಿ ಇಡೀ ಊರಿಗೆ ಆಸರೆ!
ಗ್ರಾಮದಲ್ಲಿ ಹಿಂದೆ ಇದ್ದ ಕೈಪಂಪ್ಗಳು ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. ಪ್ರಸ್ತುತ ಇಡೀ ಊರಿಗೆ ಕೇವಲ ಒಂದೇ ಒಂದು ಕೊಳವೆ ಬಾವಿ ಚಾಲ್ತಿಯಲ್ಲಿದ್ದು, ಇಡೀ ಗ್ರಾಮದ ಜನತೆ ಅದರ ಮುಂದೆಯೇ ಸಾಲುಗಟ್ಟಿ ನಿಲ್ಲಬೇಕಿದೆ. ನೀರು ಹಿಡಿಯಲು ನಡೆಯುವ ಪೈಪೋಟಿ ಹರಸಾಹಸದ ಕೆಲಸವಾಗಿ ಮಾರ್ಪಟ್ಟಿದೆ. ಪಂಚಾಯತ್ ಆಡಳಿತದ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಬಿಸಿಲಲ್ಲಿ ಹೊಲ-ಗದ್ದೆಗಳೇ ದಿಕ್ಕು
ಊರಿನಲ್ಲಿ ನೀರು ಸಿಗದ ಕಾರಣ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಕ್ಕದ ಹೊಲಗಳಲ್ಲಿರುವ ಖಾಸಗಿ ಬಾವಿ ಹಾಗೂ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಸೈಕಲ್, ತಳ್ಳುಗಾಡಿ ಮತ್ತು ಬೈಕ್ಗಳ ಮೇಲೆ ಬಿಂದಿಗೆಗಳನ್ನು ಹೇರಿಕೊಂಡು ನೀರು ಸಾಗಿಸುವುದು ಇಲ್ಲಿನ ನಿತ್ಯದ ಕಾಯಕವಾಗಿದೆ. ಮನುಷ್ಯರಿಗಷ್ಟೇ ಅಲ್ಲದೆ, ಮೂಕಪ್ರಾಣಿಗಳಾದ ದನಕರುಗಳು ಹಾಗೂ ಕುರಿ-ಆಡುಗಳೂ ಕೂಡ ನೀರಿಲ್ಲದೆ ತತ್ತರಿಸುತ್ತಿವೆ.
ಹಳ್ಳ ಹಿಡಿದ ‘ಜಲಜೀವನ್ ಮಿಷನ್’ ಯೋಜನೆ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ‘ಜಲಜೀವನ್ ಮಿಷನ್’ ಯೋಜನೆಯಡಿ ಗ್ರಾಮದಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಕಾಗದದ ಮೇಲೆ ದಾಖಲಾಗಿದ್ದರೂ, ವಾಸ್ತವದಲ್ಲಿ ಮನೆ ಮನೆಗೆ ಗಂಗೆ ತಲುಪಿಲ್ಲ. “ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯಿಸಲಾಗಿದ್ದರೂ ನಮಗೆ ಮಾತ್ರ ನೀರು ಸಿಗುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಭರವಸೆಗಳು:
”ಚವನಭಾವಿ ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ. ಕೂಡಲೇ ಸಮಸ್ಯೆಯನ್ನು ಸರಿಪಡಿಸಲಾಗುವುದು. ಸದ್ಯಕ್ಕೆ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.”
— ನಿರ್ಮಲಾ ತೋಟದ, ಪಿಡಿಒ, ಅಡವಿ ಸೋಮನಾಳ
ಅಡವಿ ಸೋಮನಾಳ ಗ್ರಾಮ ಪಂಚಾಯತಿ ”ಕುಡಿಯುವ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಚವನಭಾವಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ತುರ್ತಾಗಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.“
— ವೆಂಕಟೇಶ್ ವಂದಾಲ, ಇಒ, ತಾಲೂಕು ಪಂಚಾಯತಿ ಮುದ್ದೇಬಿಹಾಳ.
ಸಾರ್ವಜನಿಕರ ಆಗ್ರಹ: "ಅಧಿಕಾರಿಗಳು ಕೇವಲ ಭರವಸೆ ನೀಡದೆ, ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಕೆಟ್ಟಿರುವ ಕೈಪಂಪ್ಗಳನ್ನು ದುರಸ್ತಿ ಮಾಡಿಸಬೇಕು ಮತ್ತು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಸಮರ್ಪಕವಾಗಿ ನೀರು ಪೂರೈಸಲು ಮುಂದಾಗಬೇಕು" ಎಂಬುದು ಚವನಭಾವಿ ಗ್ರಾಮಸ್ಥರು ಒತ್ತಾಯವಾಗಿದೆ.