ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
ಮುದ್ದೇಬಿಹಾಳ: ಹಿಂದು ಹಬ್ಬಗಳು ನಶಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಸಮುದಾಯದವರು ಸೇರಿ ಎಲ್ಲ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ಸಮಸ್ತ ದೈವ ನಿಧರಿಸಿದೆ ಎಂದು ಮುಖಂಡ ಬಸವರಾಜ ನಂದಿಕೇಶ್ವರಮಠ ಹೇಳಿದರು.
ಪಟ್ಟಣದ ಬಜಾರನಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಣ್ಣದ ಹಬ್ಬದಲ್ಲಿ ಪ್ರಮುಖರು ಯಾರೂ ಬಣ್ಣದಾಟವನ್ನು ಆಡದೇ ಆ ಹಬ್ಬ ಕಳೆಗುಂದಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು ಎಲ್ಲ ಪ್ರಮುಖರು ಬೆಂಬಲಿಸಿದ್ದಾರೆ. ಹಾಗಾಗಿ ಬರುವ ಎಲ್ಲ ಹಿಂದು ಹಬ್ಬಗಳನ್ನ ಅತ್ಯಂತ ಶ್ರದ್ಧಾಭಕ್ತಿಯಿಂದ ಎಲ್ಲರೂ ಒಟ್ಟುಗೂಡಿ ಆಚರಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಮೂಂಚೂಣೆಯಲ್ಲಿ ನಿಂತು ಶ್ರಮಿಸಿದ ಮಹಾಂತೇಶ ಮೋಟಗಿಯವರಿಗೆ ಧನ್ಯವಾದಗಳನ್ನು ಅರ್ಪಿಸುವದಾಗಿ ತಿಳಿಸಿದರು.
ಭಾರತೀಯರಿಗೆ ಹೊಸ ವರ್ಷವೆಂದರೆ ಯುಗಾದಿ ಯಾಕೆಂದರೆ ಆ ದಿನ ಪ್ರಕೃತಿಯೂ ಕೂಡಾ ಹೊಸತನಕ್ಕೆ ಕಾಲಿಡುತ್ತದೆ. ಹಾಗಾಗಿ ಈ ಹಬ್ಬದಿಂದಲೇ ಪಟ್ಟಣದ ಎಲ್ಲ ಹಿಂದೂ ಬಾಂಧವರು ಸೇರಿ ಎಲ್ಲ ಹಬ್ಬಗಳನ್ನ ಒಗ್ಗಟ್ಟಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ಎಲ್ಲ ಸಮುದಾಯದವರ ಸಹಕಾರ ಕೋರುತ್ತೇವೆ. ಜೊತೆಗೆ ಈ ಯುಗಾದಿ ಹಬ್ಬವನ್ನ ಅದ್ಧೂರಿಯಾಗಿಸಲು ಹಬ್ಬದ ದಿನದಂದು ಪೂಜ್ಯರೊಬ್ಬರನ್ನು ಬರಮಾಡಿಕೊಂಡು ಅವರಿಂದ ಕೆಲ ಹಿತವಚನಗಳನ್ನ ಹೇಳಿಸಿ ಅಲ್ಲಿಯೇ ಬೇವು ಕುಡಿದು ಈ ವರ್ಷದ ಯುಗಾದಿಯನ್ನು ಸಂಭ್ರಮಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಇದೇ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮುಖಂಡರಾದ ಪ್ರಭು ಕಡಿ, ಅಶೋಕ ನಾಡಗೌಡ, ಗುರುಸ್ವಾಮಿ ಬೂದಿಹಾಳಮಠ, ರಾಜು ಕರಡ್ಡಿ, ಸಂಗನಗೌಡ ಪಾಟೀಲ, ವೆಂಕನಗೌಡ ಪಾಟೀಲ ಮತ್ತಿತರು ಸಲಹೆ ಸೂಚನೆಗಳನ್ನ ನೀಡಿದರು.
ಸಭೆಯಲ್ಲಿ ಸತೀಶ ಓಸ್ವಾಲ್, ಸಂಗಣ್ಣ ಜಿಟಿಸಿ, ಭತರ ಬೋಸಲೆ, ಸಿಪಿ ಸಜ್ಜನ, ಪರಶುರಾಮ ನಾಲತವಾಡ, ಚಂದ್ರು ಕಲಾಲ, ಮಹಾಂತೇಶ ಮಠಪತಿ, ಕಾಶಿನಾಥ ಬಿರಾದಾರ, ಪ್ರಭು ನಂದೆಪ್ಪನವರ, ಜಗದೀಶ ಕಂಠಿ, ಜಗದೀಶ ಲಕ್ಷಟ್ರ, ಸೇರಿದಂತೆ ಹಲವರು ಭಾಗಿಯಾಗಿದ್ದರು.
ಹಬ್ಬದ ದಿನದಂದು ದೇವಸ್ಥಾನಗಳಿಗೆ ಭಗವಾಧ್ವಜ
ರವಿವಾರ ಬೆಳಿಗ್ಗೆ ಎಲ್ಲ ಮುಖಂಡರು ಪಟ್ಟಣದ ೪೦ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿ ಯುಗಾದಿ ಹಬ್ಬದ ದಿನದಂದು ಎಲ್ಲ ದೇವಸ್ಥಾಗಳ ಮೇಲೆ ಭಗವಾಧ್ವಜವನ್ನ ಹಾರಿಸುವಂತೆ ಮತ್ತು ವಿಶೇಷ ಪೂಜೆಯನ್ನು ನೆರವೇರಿಸುವಂತೆ ದೇವಸ್ಥಾನದ ಅರ್ಚಕರುಗಳಿಗೆ ತಿಳಿಸಿದರು.