ಬೆಂಬಲ ಬೆಲೆಯಡಿ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ ತೊಗರಿ ಖರೀದಿ : ಜಿಲ್ಲಾಧಿಕಾರಿ ಭೂಬಾಲನ್
ವಿಜಯಪುರ, ಮೇ.19 :ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ನೊಂದಾಯಿಸಿಕೊಂಡ 45,843 ರೈತರ ಪೈಕಿ 39537 ರೈತರಿಂದ ಈವರೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ 6.56 ಲಕ್ಷ ಕ್ವಿಂಟಾಲ್ ತೊಗರಿಯನ್ನು ಜಿಲ್ಲೆಯಲ್ಲಿ ಖರೀದಿಸಲಾಗಿದೆ ಎಂದು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ ತೊಗರಿಯನ್ನು ವಿಜಯಪುರ ಜಿಲ್ಲೆಯಲ್ಲಿ ಖರೀದಿಸಲಾಗಿದ್ದು, ಕಲಬುರಗಿ ದ್ವೀತಿಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 10 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 9.02 ಲಕ್ಷ ಕ್ವಿಂಟಾಲ್ ಪ್ರಮಾಣಕ್ಕೆ 45,843 ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 39,537 ರೈತರಿಂದ 6.56ಲಕ್ಷ ಕಿಂಟಾಲ್ ತೊಗರಿ ಖರೀದಿಸಲಾಗಿದ್ದು, ಪ್ರತಿ ಕ್ವಿಂಟಾಲ್ ತೊಗರಿ ಬೆಂಬಲೆ ರೂ.7550 ರಂತೆ ನಾಫೆಡ್ ಸಂಸ್ಥೆಯಿಂದ 22,030 ರೈತರಿಗೆ 270 ಕೋಟಿ ರೂ.ಗಳನ್ನು ಹಾಗೂ 450 ರೂ.ರಂತೆ ರಾಜ್ಯ ಪ್ರೊತ್ಸಾಹ ಧನವನ್ನು ರೂ.10.44 ಕೋಟಿಗಳನ್ನು 14,613 ರೈತರಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ಬಾಕಿ ಉಳಿದ ರೈತರಿಗೆ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ.
ತೊಗರಿ ಖರೀದಿ ಪ್ರಕ್ರಿಯೆಯು ಮೇ.31ರವರೆಗೆ ಚಾಲ್ತಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ತೊಗರಿ ಬೆಳೆದಿರುವ ರೈತರು ತಮ್ಮ ಸಮೀಪದ ಪಿಎಸಿಎಸ್,ಟಿಎಪಿಸಿಎಂಎಸ್, ಎಫ್ಪಿಓ ಸಂಘಗಳಲ್ಲಿ ತೊಗರಿ ಮಾರಾಟ ಮಾಡಿ ಬೆಂಬಲ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.