ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಟ ಕಮಲ್ಹಾಸನ್ ಅವರು ಕನ್ನಡ ಭಾಷೆಗೆ ಅಪಚಾರವಾಗುವ ರೀತಿಯಲ್ಲಿ ಮಾತನಾಡಿರುವುದರ ಕುರಿತು ಈಗ ಕ್ಷಮೆ ಕೇಳಿದರೂ ಅವರು ನಟಿಸಿರುವ ಥಗ್ ಲೈಫ್ ಚಲನಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸ್ಪಂಧಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ತಮ್ಮ ಮನೆದೇವರು ಮುದ್ದೇಬಿಹಾಳ ತಾಲೂಕಿನ ತಂಗಡಗಿಯ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಮಂಗಳವಾರ ಕುಟುಂಬ ಸಮೇತ ಭೇಟಿ ನೀಡಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅವರಿಗೆ ಕ್ಷಮೆ ಕೇಳಲು ಸಾಕಷ್ಟು ಅವಕಾಶ ಕೊಡಲಾಗಿತ್ತು. ಆದರೂ ಅವರು ಸ್ಪಂಧಿಸಲಿಲ್ಲ. ಕನ್ನಡಿಗರ, ಕನ್ನಡದ ವಿಚಾರದಲ್ಲಿ ನಾವು ಯಾವುದನ್ನೂ ಸಹಿಸಿಕೊಳ್ಳಲು ಸಿದ್ದರಿಲ್ಲ. ಈ ಕುರಿತು ಚಲನಚಿತ್ರ ಮಂಡಳಿ ಮತ್ತು ನಿರ್ಮಾಪಕರ ಸಂಘದವರಿಗೆ ಪತ್ರವನ್ನೂ ಬರೆದಿದ್ದೇವೆ. ಅವರು ನಮ್ಮ ಜೊತೆ ಮಾತನಾಡಿ ತಮ್ಮ ತೀರ್ಮಾನ ಸ್ಪಷ್ಟಪಡಿಸಿದ್ದಾರೆ. ಅವರ ಚಲನಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ ಬಬಲೇಶ್ವರ, ತಾಲೂಕು ಅಧಿಕಾರಿ ಶಿವಲೀಲಾ ಕೊಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಸಕ ಸಂತೋಷ ಭೋವಿ, ಸ್ಥಳೀಯ ಮುಖಂಡರು ಸೇರಿ ಹಲವರು ಪಾಲ್ಗೊಂಡಿದ್ದರು.
ಮನವಿ ಸಲ್ಲಿಕೆ
ತಂಗಡಗಿಯ ಶ್ರೀ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ, ತಂಗಡಗಿಯ ಶ್ರೀ ಚರಲಿಂಗೇಶ್ವರ ದೇವಸ್ಥಾನ ಸಮಿತಿ, ತಾರನಾಳದ ಶ್ರೀ ದುರ್ಗಾದೇವಿ ದೇವಸ್ಥಾನ ಕಮೀಟಿಯವರು ಸಚಿವರನ್ನು ಭೇಟಿ ಮಾಡಿ ಪ್ರತ್ಯೇಕ ಮನವಿ ಸಲ್ಲಿಸಿ ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಬೇಡಿಕೆಗೆ ಸ್ಪಂಧಿಸಿದ ಸಚಿವರು ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರಿಂದ ಶಿಫಾರಸು ಪತ್ರ ತಂದಲ್ಲಿ ಅನುದಾನ ಬಿಡುಗಡೆಗೊಳಿಸಿ ಸಹಕರಿಸುವ ಭರವಸೆ ನೀಡಿದರು. ಹಡಲಗೇರಿಯ ಯಲ್ಲಮ್ಮದೇವಿ ಚೌಡಕಿ ಸಂಘದ ಪದಾಧಿಕಾರಿಗಳಾದ ದಾದಾಪೀರ, ರಾಗಿಣಿ ಗಂಗೂರ, ಬಿ.ಎಚ್.ವಾಲಿಕಾರ, ಮಂಜುಳಾ ಅವರು ಸಚಿವರಿಗೆ ಮನವಿ ಸಲ್ಲಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ತಮ್ಮ ತಂಡದ ಹೆಸರು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂಧಿಸುವAತೆ ಸಚಿವರು ಸ್ಥಳದಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಜಯಪುರದ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ದೇವಿಯ ದರ್ಶನ ಪಡೆದ ನಂತರ ದಂಪತಿ ಸಮೇತ ಸಚಿವರನ್ನು ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಚರಲಿಂಗೇಶ್ವರ ದೇವಸ್ಥಾನದಲಿ ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಚಿವರು ನಿರ್ಗಮಿಸುವ ಸಂದರ್ಭ ಮುದ್ದೇಬಿಹಾಳದಿಂದ ಆಗಮಿಸಿದ ದಿವಂಗತ ಮಾತೋಶ್ರೀ ನಾಗಮ್ಮ ಭೀಮಪ್ಪ ಬೆಳಗಲ್ಲ ಫೌಂಡೇಶನ್ ವತಿಯಿಂದ ಅಧ್ಯಕ್ಷ ಹಣಮಂತ ಬೆಳಗಲ್ಲ, ಸದಸ್ಯರಾದ ಸಂಗಪ್ಪ ತಂಗಡಗಿ, ಯಮನೂರಿ ತಂಗಡಗಿ ಇನ್ನಿತರರು ಸಚಿವರನ್ನು ಸನ್ಮಾನಿಸಿ ಪುಸ್ತಕ ಕಾಣಿಕೆ ನೀಡಿದರು.