ಮಹಿಳೆ ಯಾವಾಗಲೂ ಸನ್ಮಾರ್ಗವನ್ನೇ ಅವಲಂಬಿಸುತ್ತಾಳೆ: ಸ್ನೇಹಾ ನಲವಡೆ ಪ್ರತಿಪಾದನೆ
ಮುದ್ದೇಬಿಹಾಳ: “ಮಹಿಳೆಯಾದವಳು ಯಾರನ್ನೂ ಅವಲಂಬಿಸದೇ ತನ್ನದೇ ಆದ ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಾ ಸಾಗುತ್ತಾಳೆ. ಅವಳ ಸಾಧನೆಗೆ ಕುಟುಂಬದ ಬೆಂಬಲದೊಂದಿಗೆ ಸಮಾಜದ ಪ್ರೋತ್ಸಾಹವೂ ಅತ್ಯಗತ್ಯ,” ಎಂದು ಪತ್ರಿಕಾ ಪ್ರತಿನಿಧಿ ಶ್ರೀಮತಿ ಸ್ನೇಹಾ ನಲವಡೆ ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ವಿವೇಕಾನಂದ ವಿದ್ಯಾಪ್ರಸಾರಕ ಸಮಿತಿ, ಜ್ಞಾನಭಾರತಿ ವಿದ್ಯಾಮಂದಿರ ಸಮೂಹ ಸಂಸ್ಥೆ ಹಾಗೂ ವಿದ್ಯಾಮಂದಿರ ಮಾತೃಭಾರತಿ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಧನೆಗೆ ಪ್ರೇರಣೆ ಮುಖ್ಯ ತಮ್ಮ ಅನುಭವ ಹಂಚಿಕೊಂಡ ಸ್ನೇಹಾ ಅವರು, “ಪತ್ರಿಕೋದ್ಯಮದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಬೆಳೆದ ನನಗೆ ತಂದೆಯವರ ವ್ಯಕ್ತಿತ್ವ ಮತ್ತು ಅವರ ವರದಿಗಾರಿಕೆ ದೊಡ್ಡ ಸ್ಪೂರ್ತಿ ನೀಡಿತು. ಮದುವೆಯ ನಂತರ ನಲವಡೆ ಮನೆತನದ ಸೊಸೆಯಾಗಿ ಬಂದಾಗಲೂ ಅತ್ತೆ-ಮಾವ ಹಾಗೂ ಪತಿಯ ಸಹಕಾರದಿಂದ ಈ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಯಿತು. ಜ್ಞಾನಭಾರತಿ ಸಂಸ್ಥೆಯಲ್ಲಿ ದೊರೆಯುವ ಸಂಸ್ಕಾರ ಮತ್ತು ಶಿಸ್ತು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ,” ಎಂದರು.
ಇತಿಹಾಸದ ಪುಟಗಳಲ್ಲಿ ಮಹಿಳೆಯರ ಶೌರ್ಯ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭಾ ಮಾಜಿ ಸದಸ್ಯೆ ಶ್ರೀಮತಿ ಸಂಗಮ್ಮ ದೇವರಳ್ಳಿ ಮಾತನಾಡಿ, “ಕಿತ್ತೂರು ಚೆನ್ನಮ್ಮ, ಒಬವ್ವ, ಝಾನ್ಸಿ ಲಕ್ಷ್ಮೀಬಾಯಿಯಂತಹ ಶೂರ ವನಿತೆಯರು ದೇಶದ ಇತಿಹಾಸವನ್ನು ಕಾಪಾಡಿದ್ದಾರೆ. ಇಂದು ಮಹಿಳೆಯರು ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳೆ ಅಬಲೆಯಲ್ಲ, ಸಬಲೆ ಎಂಬುದು ಸಾಬೀತಾಗಿದೆ. ನಮ್ಮ ಸಂಸ್ಕೃತಿಯನ್ನು ಅರಿತು ಮಕ್ಕಳಿಗೆ ಇತಿಹಾಸದ ಅರಿವು ಮೂಡಿಸಿದರೆ ಮಹಿಳಾ ಸ್ಥಾನಮಾನಕ್ಕೆ ಸದಾ ಗೌರವ ಸಿಗುತ್ತದೆ,” ಎಂದು ತಿಳಿಸಿದರು.
ಮೊಬೈಲ್ ವ್ಯಸನದ ಬಗ್ಗೆ ಎಚ್ಚರಿಕೆ
ಆರ್.ಎಸ್.ಎಸ್ ಹಿರಿಯರಾದ ಪ್ರಭು ಕಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಮಹಿಳೆಯರನ್ನು ಸಹೋದರಿಯರಂತೆ ಕಾಣುವ ಭಾವನೆ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು ಅವರಿಗೆ ಜ್ಞಾನದ ಹಾದಿ ತೋರಿಸಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಭಾರತಿ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಪತ್ತಾರ ವಹಿಸಿದ್ದರು. ವೇದಿಕೆಯ ಮೇಲೆ ಸಂಯೋಜಕಿ ಅನ್ನಪೂರ್ಣ ನಾಗರಾಳ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಬಿ.ಪಿ. ಕುಲಕರ್ಣಿ, ಬಸವರಾಜ ನಾಲತವಾಡ, ಮಹಾದೇವಿ ಕಂಠಿ, ರಕ್ಷಿತಾ ಬಿದರಕುಂದಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.