ಎಪಿಎಂಸಿಯಲ್ಲಿ ಹಿಂದುಳಿದ ಸಮುದಾಯಕ್ಕೆ ಅವಕಾಶ ನೀಡಲು ಮಕ್ಬೂಲ್ ಪಟೇಲ್ ಆಗ್ರಹ
ಅಫಜಲಪುರ:ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮುದಾಯದ ಜನರು ಬೆಂಬಲ ನೀಡಿದ್ದಾರೆ.ಆದರೆ ಅಫಜಲಪುರ ಮತಕ್ಷೇತ್ರದಲ್ಲಿ ಕೇವಲ ಲಿಂಗಾಯತ ಸಮುದಾಯಕ್ಕೆ ಅಷ್ಟೇ ಆದ್ಯತೆ ನೀಡುತ್ತಿದ್ದು,ಹಿಂದುಳಿದ ಸಮುದಾಯಗಳಿಗೆ ಶಾಸಕ ಎಂ.ವೈ.ಪಾಟೀಲ್ ಅವಕಾಶ ನೀಡುತ್ತಿಲ್ಲ ಎಂದು ಮುಸ್ಲಿಂ ಜನ ಜಾಗೃತಿ ಸಮಿತಿ ಅಧ್ಯಕ್ಷ ಮಕ್ಬೂಲ್ ಪಟೇಲ್ ಆರೋಪಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಫಜಲಪುರ ಮತಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್,ಪಿಎಲ್ ಡಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಪುರಸಭೆ ಹೇಗೆ ಅನೇಕ ಕಡೆಗಳಲ್ಲಿ ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಲಾಗಿದೆ.ಅಲ್ಲದೇ ತಾಲೂಕಿನ ಮೂಲ ಕಾಂಗ್ರೆಸ್ಸಿಗರನ್ನು ಹೊರಗಿಟ್ಟು ಬಿಜೆಪಿ ಮತ್ತು ಆರೆಸ್ಸೆಸ್ ಸಂಘದಿಂದ ಬಂದಿರುವ ಮುಖಂಡರಿಗೆ ಮಾತ್ರ ಅವಕಾಶಗಳು ನೀಡುತ್ತಿದ್ದಾರೆ.ಈ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿರುವ ನನ್ನಂತಹ ನೂರಾರು ಕಾರ್ಯಕರ್ತರನ್ನು ಶಾಸಕರು ಮೊಲೆಗುಂಪು ಮಾಡಲು ಹೊರಟಿದ್ದಾರೆ.ಎಂ.ವೈ.ಪಾಟೀಲ್ ಅವರು ಈ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಸಂಘದ ಒಡನಾಟ ಹೊಂದಿದ್ದರಿಂದ ಈಗಲೂ ಅವರ ಮೇಲೆ ಕಾಳಜಿ ತೋರುತ್ತಿದ್ದಾರೆ.ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಲು ನಮ್ಮದೇನು ತಕರಾರು ಇಲ್ಲ,ಆದರೆ ಈಗಾಗಲೇ ಹಲವು ಕಡೆ ಅವಕಾಶಗಳು ಆ ಸಮುದಾಯಕ್ಕೆ ನೀಡಿರುವುದರಿಂದ ಇನ್ನು ಮುಂದಾದರೂ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮುದಾಯಗಳಿಗೆ ನೀಡಿದಾಗ ಮಾತ್ರ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಮತ್ತು ಎಲ್ಲ ಜಾತಿ ಜನಾಂಗದವರನ್ನು ಒಗ್ಗೂಡಿ ತೆಗೆದುಕೊಂಡು ಹೋಗುತ್ತದೆ ಎಂದು ಜನರಲ್ಲಿ ಭಾವನೆ ಮೂಡುತ್ತದೆ.ಈ ಬಗ್ಗೆಯೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ನೀಡಿರುವ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ.ಹೀಗಾಗಿ ಮುಂಬರುವ ದಿನಗಳಲ್ಲಿ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ಅನೇಕ ಕಡೆ ನಾಮ ನಿರ್ದೇಶನ ಅಧ್ಯಕ್ಷರು,ನಿರ್ದೇಶಕರು ಮಾಡುವ ಸಂದರ್ಭದಲ್ಲಿ ಹಿಂದುಳಿದ ಸಮುದಾಯ ಗಳಿಗೆ ಅವಕಾಶಗಳು ನೀಡಬೇಕು,ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಭೇಟಿಯಾಗಿ ದೂರು ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.



















